ADVERTISEMENT

ನೀರಿನ ಘಟಕಗಳ ಪರವಾನಗಿ ರದ್ದು

ಬಿ.ಐ.ಎಸ್ ಪ್ರಮಾಣಪತ್ರ ಪಡೆಯದೆ ಉದ್ಯಮ ವಹಿವಾಟು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 7:08 IST
Last Updated 3 ಆಗಸ್ಟ್ 2013, 7:08 IST

ಬಾಗಲಕೋಟೆ: ಬಿ.ಐ.ಎಸ್ ಪ್ರಮಾಣ ಪತ್ರ ಪಡೆಯದೆ ಪ್ಯಾಕೇಜ್ಡ್ ಕುಡಿಯುವ ನೀರನ್ನು ತಯಾರಿಸಿ, ವ್ಯಾಪಾರ ಮಾಡುತ್ತಿರುವ ಘಟಕಗಳ ವಿದ್ಯುತ್ ಸರಬರಾಜು ಮತ್ತು ಉದ್ದಿಮೆ ಪರವಾನಗಿಯನ್ನು ಜಿಲ್ಲಾಧಿಕಾರಿ ಮನೋಜ್ ಜೈನ್ ರದ್ದುಗೊಳಿಸಿದ್ದಾರೆ.

ಹೈಕೋರ್ಟ್ ಆದೇಶ ನಿಂದನಾ ಪ್ರಕರಣದಡಿ ಗಡುವು ನೀಡಿದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಡಿ ಕೆಲಸ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಕ್ರಮ ಕೈಗೊಂಡು ಘಟಕಗಳನ್ನು ಸ್ಥಗಿತಗೊಳಿಸಿ, ಮುಟ್ಟುಗೋಲು ಹಾಕಿದ ನಂತರವೂ ಸಾಕಷ್ಟು ಘಟಕಗಳು ಕಳ್ಳತನದಿಂದ ನೀರಿನ ವ್ಯಾಪಾರ ಮುಂದುವರಿಸುತ್ತಿರುವುದಾಗಿ ವರದಿಯಾಗಿದೆ.

ಬಿ.ಐ.ಎಸ್ ಪ್ರಮಾಣ ಪತ್ರ ಪಡೆಯದೆ ಪ್ಯಾಕೇಜ್ಡ್ ಕುಡಿಯುವ ನೀರು ತಯಾರಿಸಿ ವ್ಯಾಪಾರ ಮಾಡುತ್ತಿರುವ ಬಾಗಲಕೋಟೆಯ ಭಾಗ್ಯ ವಾಟರ್, ಅದಿತಿ ಡ್ರಿಂಕಿಂಗ್ ವಾಟರ್, ಅಮೂಲ್ಯ ವಾಟರ್, ವಿಜನ್ ವಾಟರ್, ಕ್ರಿಸ್ಟಲ್ ವಾಟರ್, ಸೃಷ್ಟಿ ವಾಟರ್, ಮುಧೋಳದ ಸಂಕುಲ ಪ್ಯೂರ್ ವಾಟರ್, ಅಕ್ವಾ ಪ್ಯೂರ್ ವಾಟರ್, ಜನನಿ ಶುದ್ಧ ವಾಟರ್, ಮಂಟೂರಿನ ಬಾಲಾಜಿ ಪ್ಯೂರ್ ವಾಟರ್, ಗುಳೇದಗುಡ್ಡದ ಶೀತಲ ಡ್ರಿಂಕಿಂಗ್ ವಾಟರ್, ಬಾದಾಮಿಯ ಅಗಸ್ತ್ಯ ಸೇಫ್ ವಾಟರ್, ಸ್ಪ್ರಿಂಗ್ ಅಕ್ವಾ ಡ್ರಿಂಕಿಂಗ್ ವಾಟರ್, ಸುಜಿತ ಜಲ, ಜಾಲಿಹಾಳದ ಉಜ್ವಲ ಪ್ರೊಸೆಸ್ ಡ್ರಿಂಕಿಂಗ್ ವಾಟರ್, ಗುಡೂರಿನ ಉತ್ಥಾನ್ ಜಲ ವಾಟರ್, ಇಲಕಲ್ಲಿನ ಅಕ್ವಾ ನೈಸ್ ವಾಟರ್, ಹುನಗುಂದದಲ್ಲಿನ ಅಕ್ವಾ ಕಿರಣ ವಾಟರ್, ಎಸ್‌ಎಲ್‌ವಿ ಪ್ಯೂರ್ ವಾಟರ್, ಅಮೀನಗಡದ ಗಂಗಾಜಲ್ ಅಕ್ವಾ, ರಾಂಪೂರದ ಗಂಗಾಜಲ ಡ್ರಿಂಕಿಂಗ್ ವಾಟರ್, ಜಮಖಂಡಿಯ ಆಲೂರ ಪ್ಲಾಟ್‌ನಲ್ಲಿನ ಎ ಒನ್ ವಾಟರ್, ಜಮಖಂಡಿಯಲ್ಲಿನ ಕಾವೇರಿ ವಾಟರ್, ರುಚಿತಾ ವಾಟರ್ ಸೇಫ್ ವಾಟರ್, ಎ.ಒನ್ ವಾಟರ್, ಪಾನಿ ವಾಟರ್, ಅಕ್ವಾ ಜಿಮ್ ಪ್ಯೂರ್ ವಾಟರ್, ಅರ್ಪಿತಾ ಬಿಸಿಲೇರಿ ವಾಟರ್, ಅಪ್ಪಾಜಿ ವಾಟರ್, ರಬಕವಿಯ ಓಂ ಜಲಂ ವಾಟರ್ ಹಾಗೂ ತೇರದಾಳದ ಲಕ್ಷ್ಮಿ ಪ್ಯೂರ್ ವಾಟರ್, ಸ್ನೇಹಾ ಡ್ರಿಂಕಿಂಗ್ ವಾಟರ್ ನೀರಿನ ಘಟಕಗಳು ಅನಧಿಕೃತವಾಗಿದ್ದು, ಇವುಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಬಾಗಲಕೋಟೆಯ ಹೆಸ್ಕಾಂ ಅಧೀಕ್ಷಕ ಎಂಜಿನಿಯರ್, ಬಾಗಲಕೋಟೆ, ರಬಕವಿ- ಬನಹಟ್ಟಿ, ಜಮಖಂಡಿ ಮತ್ತು ಇಲಕಲ್ಲದ ಪೌರಾಯುಕ್ತರು, ಬೀಳಗಿ, ಮುಧೋಳ, ಬಾದಾಮಿ, ಹುನಗುಂದ, ಗುಳೇದಗುಡ್ಡ, ತೇರದಾಳದ ಮುಖ್ಯಾಧಿಕಾರಿಗಳು, ಗುಡೂರ, ಅಮೀನಗಡ, ಜಾಲಿಹಾಳ, ಮಂಟೂರಿನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.