ADVERTISEMENT

ಬತ್ತಿದ ಮಲಪ್ರಭೆ: ಆತಂಕದಲ್ಲಿ ರೈತರು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 8:05 IST
Last Updated 21 ಮಾರ್ಚ್ 2012, 8:05 IST
ಬತ್ತಿದ ಮಲಪ್ರಭೆ: ಆತಂಕದಲ್ಲಿ ರೈತರು
ಬತ್ತಿದ ಮಲಪ್ರಭೆ: ಆತಂಕದಲ್ಲಿ ರೈತರು   

ಕೂಡಲಸಂಗಮ: ಮಲಪ್ರಭಾ ನದಿ ಸಂಪೂರ್ಣ ಬತ್ತಿದೆ. ನದಿ ತೀರದ ನೂರಾರು ಎಕರೆ ಪ್ರದೇಶದಲ್ಲಿ  ಬೆಳೆದು ನಿಂತ  ಶೇಂಗಾ, ಕಬ್ಬು  ಮೊದಲಾದ ಬೆಳೆ ಒಣಗುತ್ತಿರುವುದರಿಂದ ರೈತರು   ಕಂಗಾಲಾಗಿದ್ದಾರೆ.
ಹುನಗುಂದ ತಾಲ್ಲೂಕಿನ ನಿಂಬಲಗುಂದಿ, ಕಳ್ಳಿಗುಡ್ಡ, ಐಹೊಳೆ, ಕಮತಗಿ, ರಾಮತಾಳ, ಹಿರೇಮಾಗಿ, ಚಿಕ್ಕಮಾಗಿ, ಖೈರವಾಡಗಿ, ಪಾಪಥನಾಳ, ಮಳಗಾವಿ, ಗಂಜಿಹಾಳ, ನಂದನೂರ ಗ್ರಾಮಗಳ ರೈತರು ಕೃಷಿಗೆ ಮಲಪ್ರಭೆಯನ್ನೇ ಅವಲಂಬಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ರೈತರು ಅತಿವೃಷ್ಟಿ ಎದುರಿಸಿದ್ದಾರೆ. ಇದರಿಂದಾಗಿ ಬೆಳೆದು ನಿಂತ ಬೆಳೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ಅಪಾರ ಹಾನಿ ಅನುಭವಿಸಿದ್ದಾರೆ. ಆದರೆ ಈ ವರ್ಷ ಬರಗಾಲ ಎದುರಾಗಿದೆ.

ಹಳ್ಳಕೊಳ್ಳದ ಜತೆಗೆ ನದಿಯೂ ಬತ್ತಿ ಹೋಗಿದೆ. ನದಿ ದಂಡೆಯ ರೈತರು ಪಂಪ್‌ಸೆಟ್ ಅಳವಡಿಸಿ ಕೃಷಿ ಮಾಡುತ್ತಿದ್ದರು. ಇದೀಗ ನೀರು ಇಲ್ಲದ ಕಾರಣ ರೈತರು ಆತಂಕಕ್ಕೆ  ಒಳಗಾಗಿದ್ದಾರೆ. ನದಿಯಲ್ಲಿ ನೀರಿಲ್ಲದ ಕಾರಣ ಜಾನುವಾರುಗಳೂ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸವದತ್ತಿ ತಾಲ್ಲೂಕಿನ ನವಿಲು ತೀರ್ಥ ಜಲಾಶಯದಿಂದ ಸ್ವಲ್ಪ ನೀರು ಹರಿಯ ಬಿಟ್ಟರೆ ನದಿ ದಂಡೆಯ ಗ್ರಾಮಗಳ ಜನರ ಕುಡಿಯುವ ನೀರಿನ ಸಮಸ್ಯೆಯಾದರೂ ನೀಗಿಸಬಹುದು ಎಂದು ರೈತರು ಹೇಳುತ್ತಲೇ ಇದ್ದಾರೆ. ಆದರೆ ನದಿಗೆ ನೀರು ಹರಿದು ಬಂದಿಲ್ಲ.

ಆರಂಭಗೊಳ್ಳದ ಬರ ಕಾಮಗಾರಿ :  ಸರಕಾರ ಹುನಗುಂದ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಹಲವು ತಿಂಗಳಾದರೂ ಗ್ರಾಮ ಪಂಚಾಯಿತಿಗಳ ಮೂಲಕ ಅನುಷ್ಠಾನ ಗೊಳಿಸಲಾಗುತ್ತಿರುವ ಮಹತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳನ್ನು ಹೊರತು ಪಡಿಸಿದರೆ ದುಡಿಯವ ಕೈಗಳಿಗೆ ಕೆಲಸ ದೊರೆಯುತ್ತಿಲ್ಲ.

ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೆಲಸಗಾರರ ನೋಂದಣಿಯಲ್ಲಾದ
ದೋಷಗಳಿಂದಾಗಿ  ಗ್ರಾಮಸ್ಥರು ಕೆಲಸಲಿದ್ದರೆ ಪರದಾಡುವಂತಾಗಿದೆ. ಸ್ಥಳೀಯ ಸಂಸ್ಥೆಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದ ಕಾರಣ ಅವರು ಕೆಲಸ ಅರಿಸಿ ಗುಳೆ ಹೊರಡುವುದು ಶುರುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.