ADVERTISEMENT

ಬಾಲಕ ಸಾವು; ಗ್ರಾಮಸ್ಥರಲ್ಲಿ ಆತಂಕ

ಕೂಡಲಸಂಗಮ: ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 19 ಮೇ 2018, 9:33 IST
Last Updated 19 ಮೇ 2018, 9:33 IST
ಬಾಲಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕೂಡಲಸಂಗಮದ ಬಸ್‌ನಿಲ್ದಾಣದ ಬಳಿ ಶುಕ್ರವಾರ ಸಂಜೆ ಗುಂಪುಗಳಲ್ಲಿ ನೆರೆದಿದ್ದ ಸ್ಥಳೀಯರು ಚರ್ಚೆಯಲ್ಲಿ ತೊಡಗಿದ್ದರು.
ಬಾಲಕನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕೂಡಲಸಂಗಮದ ಬಸ್‌ನಿಲ್ದಾಣದ ಬಳಿ ಶುಕ್ರವಾರ ಸಂಜೆ ಗುಂಪುಗಳಲ್ಲಿ ನೆರೆದಿದ್ದ ಸ್ಥಳೀಯರು ಚರ್ಚೆಯಲ್ಲಿ ತೊಡಗಿದ್ದರು.   

ಕೂಡಲಸಂಗಮ : ಮನೆಯಿಂದ ಕಾಣೆ ಯಾಗಿದ್ದ 14 ವರ್ಷದ ಬಾಲಕ ಸತೀಶ ಗೀರಿಯಪ್ಪ ಪೂಜಾರಿ ಆರು ದಿನಗಳ ನಂತರ ಶವವಾಗಿ ಪತ್ತೆಯಾಗಿದ್ದಾನೆ.

ಗ್ರಾಮದಲ್ಲಿ ಬಸ್‌ನಿಲ್ದಾಣದ ಹಿಂಭಾಗದ ಸ್ಮಶಾನದಲ್ಲಿ ಶುಕ್ರವಾರ ಮಧ್ಯಾಹ್ನ ಸತೀಶನ ಶವ ಕಂಡ ಕೆಲವರು, ಪೋಷಕರಿಗೆ ತಿಳಿಸಿದ್ದಾರೆ. ನಂತರ ಗ್ರಾಮದಲ್ಲಿ ಸುದ್ದಿ ಹರಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಾಲಕನ ಮನೆಯವರಿಂದ ಹೇಳಿಕೆ ಪಡೆದುಕೊಂಡು, ಪ್ರಕ ರಣ ದಾಖಲಿಸಿಕೊಂಡರು. ಬಾಲಕ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹುನಗುಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ಗ್ರಾಮದ ಶಾಲೆಯಲ್ಲಿಯೇ ಸತೀಶ ಏಳನೇ ತರಗತಿ ಓದುತ್ತಿದ್ದನು. ಕೂಡಲಸಂಗಮ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಆತಂಕದ ಛಾಯೆ ಆವರಿಸಿದೆ. ಮಕ್ಕಳ ದೇಹದ ಅಂಗಾಂಗ ಕಳ್ಳತನ ಮಾಡುವ ವ್ಯಕ್ತಿಗಳೇ ಈ ಕೃತ್ಯವೆಸಗಿರಬಹುದು ಎಂಬ ಭಯ ದಿಂದ ಪಾಲಕರು ಮಕ್ಕಳನ್ನು ಮನೆ ಬಿಟ್ಟು ಹೊರಗಡೆ ಕಳುಹಿಸುತ್ತಿಲ್ಲ. ಸತೀಶನ ಶವದ ಫೋಟೊ ಫೇಸ್‌ಬುಕ್, ವಾಟ್ಸಪ್‌ ಮೂಲಕ ವೈರಲ್ ಆಗಿ ತಾಲ್ಲೂಕಿನ ಜನರಲ್ಲಿ ಆತಂಕ ಮನೆ ಮಾಡಿದೆ.

ADVERTISEMENT

ಪೊಲೀಸರ ವಿರುದ್ಧ ಆಕ್ರೋಶ..

ಸತೀಶ ಕಾಣೆಯಾದ ದಿನವೇ ಹುನಗುಂದ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದರೆ, ಚುನಾವಣೆ ಭದ್ರತೆ ನೆಪ ಹೇಳಿ ವಾಪಸ್‌ ಕಳುಹಿಸಿದರು. ಚುನಾವಣೆ ನಂತರವೂ ದೂರು ಕೊಡಲು ಹೋದರೂ ಸ್ಪಂದಿಸಲಿಲ್ಲ ಎಂದು ಬಾಲಕನ ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.