ADVERTISEMENT

ಬೆಳಗಾವಿ ಸುವರ್ಣಸೌಧಗೆ ಮುತ್ತಿಗೆ 7ರಂದು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2012, 8:14 IST
Last Updated 3 ಡಿಸೆಂಬರ್ 2012, 8:14 IST

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಸಮಾಜವನ್ನು ಪ್ರವರ್ಗ 2 `ಎ' ಗೆ ಸೇರಿಸುವಂತೆ ಒತ್ತಾಯಿಸಿ ಬೆಳಗಾವಿ ಸುವರ್ಣಸೌಧಕ್ಕೆ ಪಾದಯಾತ್ರೆಯ ಮೂಲಕ ತೆರಳಿ ಇದೇ 7 ರಂದು ಮುತ್ತಿಗೆ ಹಾಕಲಾಗು ವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಅಧಿವೇಶನ ಮುಗಿಯವವರೆಗೂ ಧರಣಿ ನಡೆಯಲಿದೆ ಎಂದರು.

ಇದು ಸಮಾಜದ ಹಕ್ಕೋತ್ತಾಯ ಮಾತ್ರವಲ್ಲ ನ್ಯಾಯಬದ್ಧ ಬೇಡಿಕೆ ಯಾಗಿದೆ, ಸರ್ಕಾರ ಇದೇ ಅಧಿವೇಶನ ದಲ್ಲಿ ತನ್ನ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿರುವ ಸಮಾಜದ ಬಹು ದಿನಗಳ ಬೇಡಿಕೆಯಾದ ಮೀಸಲಾತಿಯ ಕುರಿತು ಸಾಕಷ್ಟು ಮನವಿ ಸಲ್ಲಿಸಿದರೂ, ಅನೇಕ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿ ದರೂ ಅದು ಕಾರ್ಯಗತಗೊಂಡಿಲ್ಲ, ಇದಕ್ಕಾಗಿ ಸಮಾಜದ ಹೋರಾಟದ ಮೂಲಕ ಅದನ್ನು ಪಡೆದುಕೊಳ್ಳಲು ಮುಂದಾಗಿದ್ದು ಇದೊಂದು ಸ್ವಾಭಿ ಮಾನಿ ಹೋರಾಟವಾಗಿದೆ ಎಂದರು.

ಈ ನಿಟ್ಟಿನಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್, ರಾಜ್ಯ ಯುವ ಘಟಕ ಹಾಗೂ ಸಮಾ ಜದ ಎಲ್ಲ ಜಿಲ್ಲೆಯ ಸಂಘಟನೆಗಳು ಒಂದೂಗೂಡಿ ಪಾದಯಾತ್ರೆಯ ಮೂಲಕ ಬೃಹತ್ ಪ್ರತಿಭಟನೆಯನ್ನು ನಡೆಸಿ ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಸಮಾಜಕ್ಕೆ ನ್ಯಾಯ ಪಡೆದುಕೊಳ್ಳಲಾಗುವುದು ಎಂದು ಹೇಳಿದರು.

ಸ್ವತಂತ್ರ ಧರ್ಮವಾಗಿ ಲಿಂಗಾಯತ ಪಂಚಮಸಾಲಿ ಧರ್ಮಕ್ಕೆ ಮಾನ್ನತೆ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಇದೇ ಸಂದರ್ಭದಲ್ಲಿ  ಅವರು ಒತ್ತಾಯಿಸಿದರು.

ಯುವ ಘಟಕದ ಅಧ್ಯಕ್ಷ ರಾಜು ಮೆಣಸಿನಕಾಯಿ, ಮುಖಂಡರಾದ ಟಿ.ಎಂ. ಭಗವತಿ, ಬಿ.ಎನ್. ಪಾಟೀಲ, ಬಸವರಾಜ ವಜ್ಜರಮಟ್ಟಿ, ಶಿವಾನಂದ ಅಫ್ಜಲಪುರ, ಡಾ. ವಿಜಯ ಕಂಠಿ, ಶಿವಪ್ರಸಾದ ಗದ್ದಿ, ಎನ್.ಎಂ. ನಿಂಗನೂರ, ಶಂಕ್ರಣ್ಣ ಕಳ್ಳಿಗುಡ್ಡ, ಕೊಪ್ಪದ, ಅಮರೇಶ ನಾಗೂರ, ಚನ್ನವೀರ ಅಂಗಡಿ, ಶರಣಪ್ಪ ಯಂಡಿಗೇರಿ, ಕೋತಿನ, ಶಿರೂರ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.