ADVERTISEMENT

ಮಮದಾಪುರ ಹೋರಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 10:15 IST
Last Updated 17 ಫೆಬ್ರುವರಿ 2012, 10:15 IST

ಬಾಗಲಕೋಟೆ: ನಗರದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯಲ್ಲಿ ಪ್ರದರ್ಶಿತ ಉತ್ತಮ ರಾಸುಗಳಲ್ಲಿ ಆಯ್ಕೆಯಾದ ವಿಜಾಪುರ ಜಿಲ್ಲೆಯ ಮಮದಾಪುರ ಗ್ರಾಮದ ಎಸ್.ಬಿ. ಶಿವಪ್ಪಗೋಳರ ನಾಲ್ಕು ಹಲ್ಲಿನ ಹೋರಿ ಸಮಗ್ರ ಪ್ರಶಸ್ತಿ (ಚಾಂಪಿಯನ್) ಪಟ್ಟಪಡೆದುಕೊಂಡಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಕೇಸನೂರು ಮಾರುಕಟ್ಟೆ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಮೋಟಗಿ ಬಸವೇಶ್ವರ ಜಾನುವಾರು ಜಾತ್ರೆಯ ಸಮಾರೋಪ ಸಮಾ ರಂಭದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಲಾಯಿತು. ಕಳೆದ ಐದು ದಿನಗಳಿಂದ ನಡೆದ ಜಾನುವಾರು ಜಾತ್ರೆಗೆ ಸಂಭ್ರಮದ ತೆರೆಬಿದ್ದಿತು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಟೀಕಿನಮಠದ ರೇವಣಸಿದ್ಧ ಸ್ವಾಮೀಜಿ ಸೇರಿದಂತೆ ಗಣ್ಯರು ಉತ್ತಮ ರಾಸುಗಳಿಗೆ ಬಹುಮಾನ ವಿತರಿಸಿದರು.

ಹಾಲು ಹಲ್ಲಿನ ಹೋರಿ:
ಹಾಲು ಹಲ್ಲಿನ ಹೋರಿ ವಿಭಾಗದಲ್ಲಿ ಚೆನ್ನಾಪುರದ ಬಿ.ಬಿ.ನಜರದವರ ಹಾಲು ಹಲ್ಲಿನ ಹೋರಿ ಪ್ರಥಮ, ರಾಯಭಾಗ ತಾಲ್ಲೂಕಿನ ಕಮಲಾಪುರ ಗ್ರಾಮದ ಪಿ.ಕೆ.ಅಂಬಿ ದ್ವಿತೀಯ ಮತ್ತು ಚೆನ್ನಾಪುರದ ಲೋಕೇಶ ನಜರದ ಹೋರಿ ತೃತೀಯ ಬಹುಮಾನ ಪಡೆದಿದೆ.

 ಎರಡು ಹಲ್ಲಿನ ಹೋರಿ:
ಎರಡು ಹಲ್ಲಿನ ಹೋರಿ ವಿಭಾಗದಲ್ಲಿ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ಎ.ಬಿ.ಕೊಕಟನೂರ ಹೋರಿ ಪ್ರಥಮ, ಆಲಗೂರಿನ ಎಂ.ಬಿ. ಖಾನಾಪುರ ಹೋರಿ ದ್ವಿತೀಯ, ನಾಗನೂರಿನ ಎಸ್.ಬಿ. ಯಲಗುದ್ರಿ ಹೋರಿ ತೃತೀಯ ಬಹುಮಾನ ಪಡೆದುಕೊಂಡಿತು.

ನಾಲ್ಕು ಹಲ್ಲು ಹೋರಿ:  ನಾಲ್ಕು ಹಲ್ಲಿನ ಹೋರಿಯಲ್ಲಿ ವಿಜಾಪುರ ಜಿಲ್ಲೆಯ ಮಮದಾಪುರ ಗ್ರಾಮದ ಎಸ್.ಬಿ. ಶಿವಪ್ಪಗೋಳರ ನಾಲ್ಕು ಹಲ್ಲಿನ ಹೋರಿ ಪ್ರಥಮ, ಸೇಗುಣಸಿಯ ರಾಜು ಕರಿಯಪ್ಪನವರ ದ್ವಿತೀಯ, ಜಮ್ಮನಕಟ್ಟಿಯ  ಬಿ.ಎಸ್.ಚಿಮ್ಮನಕಟ್ಟಿಯ ನಾಲ್ಕು ಹಲ್ಲಿನ ಹೋರಿಯಲ್ಲಿ ತೃತೀಯ ಬಹುಮಾನವನ್ನು  ಪಡೆದುಕೊಂಡಿತು.

ಆರು ಹಲ್ಲಿನ ಹೋರಿ: ಆರು ಹಲ್ಲಿನ ಹೋರಿ ವಿಭಾಗದಲ್ಲಿ   ಶಿರೂರಿನ ಎಸ್.ವಿ. ಕೋಟಿಕಲ್ಲರ ಆರಲ್ಲಿನ ಹೋರಿ ಪ್ರಥಮ, ಎಸ್.ಸಿ. ಕೋಟಿಕಲ್ ದ್ವಿತೀಯ, ಮುಧೋಳ ತಾಲ್ಲೂಕಿನ ಛತ್ರಬಾನಕೋಟೆಯ ಗ್ಯಾನಪ್ಪ ಚಿಪ್ಪಾಲಕಟ್ಟಿ  ಅವರ ಹೋರಿ ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿತು.

ಎತ್ತಿನಗಾಡಿ ವಿಭಾಗ: ಎತ್ತಿನ ಗಾಡಿ ವಿಭಾಗದಲ್ಲಿ ಚಿಕ್ಕಗಲಗಲಿಯ ಹನಮಂತ ಬಿರಾದಾರ ಪ್ರಥಮ, ಬಾದಾಮಿ ತಾಲ್ಲೂಕಿನ ಹನುಮನೇರಿಯ  ಎಚ್.ಎಂ.ಸಂಶಿ ದ್ವಿತೀಯ, ಗದ್ದನಕೇರಿ ತಾಂಡಾದ ಹೂವಪ್ಪ ರಾಠೋಡರ ಎತ್ತಿನ ಗಾಡಿ ತೃತೀಯ ಬಹುಮಾನ ಪಡೆದುಕೊಂಡಿತು.

ಕಿಲಾರಿ ಆಕಳು: ಉತ್ತಮ ಕಿಲಾರಿ ಆಕಳು ವಿಭಾಗದಲ್ಲಿ ಹುನಗುಂದದ ಎಂ.ಎಸ್.ಪಾಟೀಲ ಪ್ರಥಮ, ಜಾನಮಟ್ಟಿಯ ಆರ್.ಪಿ. ಯಡಹಳ್ಳಿ ದ್ವಿತೀಯ, ಕೆ.ಪಿ. ಕೆಂಚಮಲ್ಲನವರ ಕಿಲಾರಿ ಹಸು ತೃತೀಯ ಸ್ಥಾನವನ್ನು ಪಡೆದುಕೊಂಡಿತು.

ಸಿಪಿಐ ಬಿ.ಎಸ್.ಪಾಟೀಲ, ಕಟ್ಟಿಮನಿ, ಎಪಿಎಂಸಿ ಉಪಾಧ್ಯಕ್ಷ ಎಸ್.ಎಂ.ಹರಗಬಲ್ಲ, ಸದಸ್ಯ ಅರಿಷಿಣಗೋಡಿ, ಸುರೇಶ ಕೊಣ್ಣೂರ, ಸಂಗಣ್ಣ ಕಲಾದಗಿ, ಉಮೇಶ ಜುಮನಾಳ, ಸಂಗಪ್ಪ ಕೊಪ್ಪದ, ರಮೇಶ, ಸತೀಶ ಬೆನಕಟ್ಟಿ ಹಾಜರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.