ADVERTISEMENT

ಮಳೆ; ಬಿತ್ತನೆ ಚುರುಕು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:40 IST
Last Updated 8 ಅಕ್ಟೋಬರ್ 2012, 8:40 IST

ಬಾಗಲಕೋಟೆ: ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಸಂಜೆಯಾಗುತ್ತಿದಂತೆ ಮಳೆಯಾಗತೊಡಗಿದೆ. ಹದ ಮಳೆಯಿಂದ ಕೃಷಿ ಕಾರ್ಯ ಚುರುಕುಗೊಂಡಿದೆ. ಜೋಳ, ಬಿಳಿಜೋಳ, ಕಡಲೆ ಮತ್ತು ಸೂರ್ಯಕಾಂತಿ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ.

ಶನಿವಾರ ರಾತ್ರಿ ಮತ್ತು ಭಾನುವಾರ ಸಂಜೆ ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆಯಾಯಿತು. ಬಾಗಲಕೋಟೆ, ಬಾದಾಮಿ, ಹುನಗುಂದ, ಜಮಖಂಡಿ, ಮುಧೋಳ, ಬೀಳಗಿ ತಾಲ್ಲೂಕಿನಾದ್ಯಂತ ಮಳೆಯಾಗಿರುವುದು ಬರದಿಂದ ಕಂಗೆಟ್ಟ ರೈತರ ಮೊಗದಲ್ಲಿ ನಗೆ ಬೀರಿದೆ. ಬರದಿಂದ ಬಿಕೋ ಎನ್ನುತ್ತಿದ್ದ ಹೊಲಗಳಲ್ಲಿ ಹಸಿರು ನಿಧಾನವಾಗಿ ಚಿಗುರೊಡೆಯತೊಡಗಿದೆ.

ಧಾರಾಕಾರ ಮಳೆ
ಬಾದಾಮಿ
: ನಗರ ಸೇರದಂತೆ ಸುತ್ತಲಿನ ಪ್ರದೇಶದಲ್ಲಿ ಗುಡುಗು-ಸಿಡಿಲಿನ ಆರ್ಭಟ
ದೊಂದಿಗೆ ಸಂಜೆ ಒಂದು ಗಂಟೆ ಕಾಲ ಧಾರಾಕಾರವಾಗಿ ಮಳೆ ಸುರಿಯಿತು.ಮಳೆಯಿಂದ ರೈತರಿಗೆ ಹರ್ಷ ಉಂಟಾಯಿತು. ನಗರದ ರಸ್ತೆಯಲ್ಲಿ ನೀರು ತುಂಬಿ ಹರಿಯಿತು. ಚರಂಡಿಗಳೆಲ್ಲ ಸ್ವಚ್ಛವಾದವು. ಹಿಂಗಾರು ಜೋಳ ಬಿತ್ತನೆಗೆ ರೈತರು ಮಳೆಯ ದಾರಿಯನ್ನೇ ಕಾಯುತ್ತಿದ್ದರು.
 
ಹಿಂಗಾರು ಬಿತ್ತನೆಗೆ ರೈತರು ಬೀಜ, ಗೊಬ್ಬರವನ್ನು ಸಜ್ಜು ಮಾಡಿಕೊಂಡಿದ್ದಾರೆ. ಮಳೆಯಿಂದ ಮಂಗಳವಾರದಿಂದ ಬಿತ್ತನೆಯ ಕಾರ್ಯವನ್ನು ಚುರುಕುಗೊಳಿಸುತ್ತೇವೆ, ಬಿತ್ತಿದ ಬೆಳೆಗೆ ಮತ್ತಷ್ಟು ಅನುಕೂಲವಾಯಿತು. ಇನ್ನೊಂದೆರಡು ಸಲ ಈ ರೀತಿ ಮಳೆ ಬಂದರೆ ಹಿಂಗಾರು ಬೆಳೆ ಬರುವುದು ಗ್ಯಾರಂಟಿ ಎಂದು ರೈತರು ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.