ADVERTISEMENT

ಯಾರಿಗೆ ಅಪ್ಪಾ..ಅವ್ವಾ.. ಅನ್ನುನೋ....!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:10 IST
Last Updated 6 ಫೆಬ್ರುವರಿ 2012, 9:10 IST

ಅಮೀನಗಡ: ಇನ್ನ ಮುಂದ ನಾವ ಯಾರಿಗೆ ಅಪ್ಪ..ಅವ್ವ ಅನ್ನುನೋ.., ಸಕ್ಕರಿ, ಕೊಬ್ಬರಿ ಕೊಡತ್ತಿದ್ದ ನಮ್ಮವ್ವ ಇಲ್ಲರ‌್ರೀ ಎಂದು ಎದೆ ಬಡಿದುಕೊಂಡು ಅಳುತ್ತಿದ್ದರು. ಇದನ್ನು ಕಂಡ ಜನರು ಮಮ್ಮಲ ಮರಗುತ್ತಿದ್ದರು.

ಇದು ಶನಿವಾರ ಅಮೀನಗಡ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇ ಮಾಗಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅಕ್ಕ-ತಮ್ಮ ಈರಮ್ಮ (18), ಯಲ್ಲಪ್ಪ(14)ನ ದುರಂತ ಸ್ಥಿತಿ.

ಸುತ್ತಲೂ ಕಬ್ಬಿನ ತೋಟವಿದೆ.ಅದರ ನಡುವೆ ಬಿತ್ತಲಾರದ ಜಮೀನು ಇದೆ. ಇಲ್ಲಯೇ ನಡೆದಿದೆ. ತಂದೆ-ತಾಯಿಯ ಶವಪರೀಕ್ಷೆ ಕಾರ್ಯ. ಇದರಿಂದ 100ಮೀಟರ್ ದೂರದಲ್ಲಿ ಕುಳಿತು ಕೊಂಡು ಹಣೆ ಮೇಲೆ ಕೈಇಟ್ಟುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಅತ್ತು ಅತ್ತು ಸುಸ್ತಾಗಿ ಆಗಾಗ ಮೂರ್ಚೆ ಹೋಗಿ ಮೌನಕ್ಕೆ ಶರಣರಾಗುತ್ತಿದ್ದರು.

ಸ್ಮಶಾನಮೌನವಾದ ವಾತಾವರಣ ದಲ್ಲಿ ಅಕ್ಕ-ತಮ್ಮನ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಅಪ್ಪ- ಅವ್ವನ ಜೊತೆ ನಮ್ಮನ್ನು ಸಾಯಿಸಿದ್ದ್ರ ಚುಲೋಯಿತ್ತರ‌್ರೀ, ನಮಗ ಹಿಂದು ಇಲ್ಲಾ,  ಮುಂದು ಇಲ್ಲಾ,  ನಾವ ಅನಾಥರಾದ್ವ್ರೀ,ನಾವು ಬದುಕುವದು ಹೆಂಗರ‌್ರೀ ಎಂದು ಬೋರಾಡಿ ಅಳುತ್ತಿದ್ದರು.

ಎತ್ತು ಬಂದಿದ್ದ ಗೊತ್ತಾಯಿತು:
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಆಗಾಗ ಜಗಳ ಆಗು ತ್ತಿತ್ತು.ಒಮ್ಮೆ ಅತಿರೇಕಕ್ಕೆ ಹೋಗಿ ಅಣ್ಣ ಚನ್ನಬಸಪ್ಪ ಗ್ರಾಮವನ್ನು ತೊರೆದಿದ್ದನು. ಶನಿವಾರ ನಂದೆಪ್ಪ ಇರುವ ತೋಟಕ್ಕೆ ಹೋಗಿ ನಂದೆಪ್ಪ, ಅವನ ಹೆಂಡತಿ ಶಾಂತವ್ವಳನ್ನು ಕಬ್ಬಿನ ರಾಡು ಮತ್ತು ಮಚ್ಚಿನಿಂದ ಹೊಡೆದು ಸಾಯಿಸಿ, ಪಕ್ಕದ ಹೊಲದಲ್ಲಿದ್ದ ಮೇವಿನಲ್ಲಿ ಹಾಕಿ ಸುಟ್ಟು ಪರಾರಿಯಾಗಿದ್ದಾನೆಂದು ಹೇಳ ಲಾಗಿದೆ.
 
ಈ ಘಟನೆ ನಡೆಯು ಮೊದಲ ಎರಡು ದಿನಗಳ ಹಿಂದೆ ಚನ್ನಬಸಪ್ಪ ಗ್ರಾಮಕ್ಕೆ ಬಂದು ಹೋಗಿದ್ದನು ಎಂದು ಗ್ರಾಮಸ್ಥರು ಮಾತನಾಡಿ ಕೊಳ್ಳುತ್ತಿದ್ದರು.

ಬಂಡಿಯಿಂದ ಕೊರಳು ಹರಿದುಕೊಂಡು ಮನೆಗೆ ಎತ್ತು ಬಂದಿದೆ. ಇದನ್ನು ಕಂಡ ಮಗ ಹೊಲದತ್ತ ಹೋಗಿದ್ದಾನೆ. ರಕ್ತದ ಕಲೆಗಳನ್ನು, ಹರಿದ ಬಟ್ಟೆಗಳನ್ನು ನೋಡಿ ಮುಂದೆ ನೋಡಿದಾಗ ತಂದೆ-ತಾಯಿ ದೇಹಗಳು ಮೇವಿನಲ್ಲಿ ಸುಡುತ್ತಿದ್ದವು ಎಂದು 14ವರ್ಷದ ಮಗ ಯಲ್ಲಪ್ಪ ಅಳುತ್ತಲೇ ಹೇಳುತ್ತಿದ್ದನು. ಇದನ್ನು ಕೇಳುತ್ತಿದ್ದ ಜನರು ಕಣ್ಣೀರು ಹಾಕಿದರು.

ಸಾಯಿಸೆ ಊರಿಗೆ ಬರತಿನಿ: ಹಿರೇಮಾಗಿ ಗ್ರಾಮದಲ್ಲಿ ಶನಿವಾರ ನಡೆದಿರುವ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಅದೇ ಗ್ರಾಮದ ಚನ್ನಬಸಪ್ಪ ವೀರಭದ್ರಪ್ಪ ಕಾಳಿ ಇವರನ್ನು ಸಾಯಿಸೆ ಊರಿಗೆ ಬರುತ್ತೇನೆ ಎಂದು ಗ್ರಾಮಸ್ಥರ ಎದುರು ಹೇಳುತ್ತಿದ್ದನು ಎಂದು ಹೇಳಲಾಗುತ್ತಿದೆ. ಈಗಾಗಲೇ ಅಣ್ಣ ಚನ್ನಬಸಪ್ಪ ಮತ್ತು ತಮ್ಮ ನಂದೆಪ್ಪ ರೌಡಿ ಪಟ್ಟಿಯಲ್ಲಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.