ADVERTISEMENT

‘ರೈತರ ಹಣ ದುರ್ಬಳಕೆ ಮಾಡಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 5:15 IST
Last Updated 2 ಏಪ್ರಿಲ್ 2018, 5:15 IST

ಗುಳೇದಗುಡ್ಡ: ‘ಸಾಲ ಮನ್ನಾ ಸೌಲಭ್ಯ ಪಡೆದ ಫಲಾನುಭವಿ ರೈತರಿಂದ ₹1000, ₹500 ಗಳಂತೆ ಕೃಷಿ ನಿರ್ಮಾಣ ನಿಧಿಯನ್ನು ಪಡೆದ ಹಣವನ್ನು ಆಡಳಿತ ಮಂಡಳಿ ದುರುಪಯೋಗ ಪಡಿಸಿಕೊಂಡಿಲ್ಲ. ಅವರ ಹಣವನ್ನು ಸಂಘದ ಅಭಿವೃದ್ಧಿ ಸಲುವಾಗಿ ಕೃಷಿ ನಿರ್ಮಾಣ ನಿಧಿ ಖಾತೆಯಲ್ಲಿ ಕಾಯ್ದಿರಿಸಲಾಗಿದೆ’ ಎಂದು ಕೋಟೆಕಲ್ಲ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಗಪ್ಪ ಹಡಪದ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ‘ಸಂಘದ ಆಡಳಿತ ಮಂಡಳಿ ಸದಸ್ಯರು ಸಾಲ ಮನ್ನಾ ಸೌಲಭ್ಯ ಪಡೆದ ರೈತ ಫಲಾನುಭವಿಗಳಿಂದ ಹಣ ಪಡೆದು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೆಲವು ರೈತರು ಪ್ರತಿಭಟನೆ ಮಾಡುವ ಮೂಲಕ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ’ ಎಂದರು.

‘ಆಡಳಿತ ಮಂಡಳಿ ಸದಸ್ಯರ ಸಭೆ ನಡೆಸಿ ರೈತರ ಹಣವನ್ನು ಸಂಘವು ಗುಳುಂ ಮಾಡಿಲ್ಲ. ಸಂಘದ ಕೃಷಿ ನಿರ್ಮಾಣ ನಿಧಿ ಖಾತೆಗೆ 2017ರ ಡಿಸೆಂಬರ್‌ 30ರಿಂದ 2018 ಮಾರ್ಚ್‌ 3ರವರೆಗೆ 207 ಜನ ರೈತ ಸದಸ್ಯರಿಂದ ಪಡೆದ ₹1,73,100 ಹಣವನ್ನು ಸಂಘದ ಆಡಳಿತ ಮಂಡಳಿಯು ಸಭೆಯಲ್ಲಿ ಮಾಡಿದ ಠರಾವಿನಂತೆ ಜಮಾ ಮಾಡಲಾಗಿದೆ. ಈ ಹಣವನ್ನು ಸಂಘದ ಗೋಡಾನ್ ಕಟ್ಟಡ ನಿರ್ಮಾಣಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿತ್ತು. ಹಣ ಪಡೆದ ಪ್ರತಿಯೊಬ್ಬ ರೈತರಿಗೆ ಕೃಷಿ ನಿರ್ಮಾಣ ನಿಧಿಯ ರಸೀದಿ ಕೊಡಲಾಗಿದೆ. ಇದರಲ್ಲಿ ಯಾವುದೇ ರೈತರ ಹಣವನ್ನು ದುರ್ಬಳಕೆ ಮಾಡಿಕೊಂಡಿಲ್ಲ’ ಎಂದರು.

ADVERTISEMENT

‘ರೈತರಿಂದ ಪಡೆದ ಹಣವನ್ನು ಕೃಷಿ ನಿರ್ಮಾಣ ನಿಧಿಯ 207 ಜನ ಸದಸ್ಯರ ಮೊತ್ತವನ್ನು ಸಂಘದಲ್ಲಿನ ರೈತರ ಉಳಿತಾಯ ಖಾತೆಗೆ ಜಮಾ ಮಾಡುವಂತೆ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ. ಸಂಘದ ಆಡಳಿತ ಮಂಡಳಿ ಸದಸ್ಯರ ಮತ್ತು ರೈತರ, ಸಿಬ್ಬಂದಿ ಸಹಕಾರದಿಂದ ಸಂಘವು ಉತ್ತಮ ಹಣಕಾಸಿನ ವ್ಯವಹಾರ, ರೈತರಿಗೆ ಸರ್ಕಾರದ ಸೌಲಭ್ಯ ನೀಡಿದ ಹಿನ್ನೆಲೆಯಿಂದ ನಮ್ಮ ಸಹಕಾರಿ ಸಂಘವು 1998 ರಿಂದ ಇಲ್ಲಿವರೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆಯಲು ರೈತ ಸದಸ್ಯರ ಸಹಕಾರವೇ ಕಾರಣ’ ಎಂದು ಸಂಘದ ಅಧ್ಯಕ್ಷರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದ್ಯಾಮಣ್ಣ ಆರ್. ಗದ್ದನಕೇರಿ, ಮಹಾಗುಂಡಪ್ಪ ಸುಂಕದ, ಯಲ್ಲಪ್ಪ ಎಚ್. ಪೂಜೇರಿ, ಮಹಾದೇವಪ್ಪ ಕೋಟಿ, ಯಲಗುರದಪ್ಪ ತೊಗಲಂಗಿ, ಬಸಪ್ಪ ಗೌಡರ, ಶಿದ್ಲಿಂಗಪ್ಪ ಎಚ್. ಕಡ್ಲಿಮಟ್ಟಿ, ಮುತ್ತವ್ವ ಎನ್. ಅಬಕಾರಿ, ಲಕ್ಷ್ಮವ್ವ ಎಚ್. ಹಿರೇಹಾಳ, ವ್ಯವಸ್ಥಾಪಕ ಹರೀಶ ಗೌಡರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.