ಇಳಕಲ್: ಮಕ್ಕಳ ಕಳ್ಳತನದ ವದಂತಿ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಇಳಕಲ್ ನಗರ ಪೊಲೀಸ್ ಠಾಣೆ ಪಿಎಸ್ಐ ಎನ್.ಆರ್.ಖೀಲಾರಿ ನೇತೃತ್ವದಲ್ಲಿ ನಡೆಯಿತು.
ನಗರದ ಸಾಲೇಶ್ವರ ಭವನದಲ್ಲಿ ನಡೆದ ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, 'ಯಾವುದೋ ಒಂದು ಟಿ.ವಿ. ಚಾನಲ್ನಲ್ಲಿ ಇಳಕಲ್ ಹತ್ತಿರದ ಗುಡಲ್ ಎಂಬ ಗ್ರಾಮದಲ್ಲಿ ಮಕ್ಕಳ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂಬ ಆಧಾರ ರಹಿತ ಸುದ್ದಿ ಪ್ರಸಾರವಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ. ಮಕ್ಕಳ ಕಳ್ಳತನದ ಯತ್ನವೇ ನಡೆಯದೇ ಇರುವಾಗ ಬಂಧನದ ಪ್ರಶ್ನೆಯೇ ಬರುವುದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ಇಳಕಲ್ ಸಮೀಪ ಅಥವಾ ಹುನಗುಂದ ತಾಲ್ಲೂಕಿನಲ್ಲಿ 'ಗುಡಲ್' ಎನ್ನುವ ಹೆಸರಿನ ಗ್ರಾಮವೇ ಇಲ್ಲ. ಇದು ಕೇವಲ ವದಂತಿಯಷ್ಟೆ. ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ' ಎಂದು ಸ್ಪಷ್ಟಪಡಿಸಿದರು.
'ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಮೇಲೆ ಹಲ್ಲೆ ನಡೆಸದೇ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಇಲ್ಲವೇ ಪೊಲೀಸರಿಗೆ ಮಾಹಿತಿ ನೀಡಬೇಕು. ನೇರವಾಗಿ ನನ್ನ ಮೊ.9480803954ಗೂ ಕರೆಮಾಡಿ ತಿಳಿಸಬಹುದು. ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳಬಾರದು' ಎಂದು ಪಿಎಸ್ಐ ಖಿಲಾರಿ ವಿನಂತಿಸಿದರು. ಸಭೆಯಲ್ಲಿ ಸಾಯಿಗಣೇಶ ಸೇವಾ ಸಂಘದ ಸದಸ್ಯರು, ಮಹಿಳೆಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.