ADVERTISEMENT

ವರುಣನ ಅವಕೃಪೆಗೆ ರೈತ ಕಂಗಾಲು

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 6:25 IST
Last Updated 9 ಜುಲೈ 2012, 6:25 IST

ಕೂಡಲಸಂಗಮ: ಮಳೆ ಸರಿಯಾಗಿ ಬಾರದಿರುವುದು ಹಾಗೂ  ರೈತರ ಜೀವ ನದಿಗಳಾದ ಕೃಷ್ಣಾ ಹಾಗೂ ಮಲಪ್ರಭಾ ನದಿಗಳು ಕಳೆದ 4 ತಿಂಗಳಿಂದ ಸಂಪೂರ್ಣ ಬರಿದಾಗಿರುವುದರಿಂದ ಹುನಗುಂದ ತಾಲ್ಲೂಕಿನ ಕೆಂಗಲ್, ಕಜಗಲ್ಲ, ವರಗೊಡದಿನ್ನಿ, ಹೂವನೂರ, ನಂದನೂರ, ಗಂಜಿಹಾಳ, ಚಿಕ್ಕಮಳಗಾವಿ, ಚಿಕ್ಕಮಾಗಿ, ಹಿರೇಮಾಗಿ, ಚಿತ್ತರಗಿ, ಬಿಸನಾಳಕೊಪ್ಪ, ಬೆಳಗಲ್ಲ, ಚವಡಕಮಲದಿನ್ನಿ, ವಳಕಲದಿನ್ನಿ ಕೂಡಲಸಂಗಮ ಮುಂತಾದ ಗ್ರಾಮಗಳ ರೈತರ ಬದುಕು ಚಿಂತಾಜನಕವಾಗಿದೆ.

ಮಳೆ ಇಂದು ಬರುಬಹುದು, ನಾಳೆ ಬರಬಹುದು ಎಂದು ಕಾಯುತ್ತಾ ಕುಳಿತಿರುವ ರೈತನ ಮುಂದಿನ ಜೀವನದ ಕುರಿತು ಕಂಗಾಲಾಗಿರುವನು.  ಮಳೆಗಾಗಿ ದೇವರನ್ನು  ಸತೃಪ್ತ ಪಡಿಸಲು  ಮದುವೆ, ಜಾತ್ರೆ, ಹರಕೆ ಮುಂತಾದ ಧಾರ್ಮಿಕ ಸಂಪ್ರದಾಯಗಳನ್ನು ಮಾಡಿದರು ಮಳೆ ಬರುತ್ತಿಲ್ಲ.

`ಜಾನುವಾರಗಳಿಗೆ ತಿನ್ನಲು ಮೇವು ಇಲ್ಲ, ಬಿತ್ತನೆಗೆ ಸಿದ್ಧ ಮಾಡಿದ ಭೂಮಿ ಸಂಪೂರ್ಣ ಖಾಲಿ ಇರುವುದನ್ನು ನೋಡಿದರೆ ಮನಸ್ಸಿಗೆ ನೋವಾಗ್ತದೆ. ನಮ್ಮ ಕಷ್ಟ ಯಾರಿಗೂ ತಿಳಿಯಲ್ಲ~ ಎಂದು ರೈತ ಪರಸಪ್ಪ ಚಲವಾದಿ ಹೇಳುತ್ತಾರೆ.

ನದಿಯು ಸಂಪೂರ್ಣ ಬರಿದಾಗಿರುವುದರಿಂದ ನದಿಯ ದಡದಲ್ಲಿಯ ಅಪಾರ ಪ್ರಮಾಣದ ಕಬ್ಬು ಮತ್ತು  ಬಾಳೆ ಸಂಪೂರ್ಣ ಬತ್ತಿ ಹೋಗಿವೆ. `ಸಾಲ ಮಾಡಿ ಕಬ್ಬು, ಬಾಳೆಯ ವ್ಯವಸಾಯ ಮಾಡುತ್ತಿದ್ದೆವೆ ಈಗ ಸಂಪೂರ್ಣ ಕಬ್ಬು, ಬಾಳೆ ಸಂಪೂರ್ಣ ಬತ್ತುತಿರುವುದರಿಂದ ಸಾಲ ಭರಿಸುವುದು ಹೇಗೆ ?  ಉಪಜೀವನ ಮುನ್ನೆಡೆಸುವುದು ಮತ್ತು  ಮಕ್ಕಳನ್ನು ಶಾಲೆಗೆ ಕಳಿಸವುದು ತಿಳಿಯದಾಗಿದೆ~ ಎಂದು ದುರ್ಗಪ್ಪ ಮಾದರ ಹೇಳುವರು.

ಹುನಗುಂದ ತಾಲ್ಲೂಕಿನಲ್ಲಿ 34,100 ಹೆಕ್ಟೇರ್ ಪ್ರದೇಶದ ಬಿತ್ತನೆಯ ಗುರಿಹೊಂದಲಾಯಿತು. ಆದರೆ ಇನ್ನೂ ಬಿತ್ತನೆಯ ಕಾರ್ಯ ನಡದೆ ಇಲ್ಲ. ಕಳೆದ ವರ್ಷ ಜುಲೈ ಮೊದಲ ವಾರಕ್ಕೆ 259 ಮಿ.ಮೀ ಮಳೆಯಾಗಿತ್ತು. ಆದರೆ ಈ ವರ್ಷ 58.5 ಮೀ ಆಗಿದೆ.  ಇನ್ನೂ ಒಂದು ತಿಂಗಳು ಮಳೆಯಾಗದೆ ಇದ್ದರೆ ರೈತ ಬೇರೆ ಕಡೆ ದುಡಿಯಲು ಹೋಗಬೇಕಾಗುವುದು ಎಂದು ರೈತ ಮುಖಂಡ ಸಂಗಪ್ಪ ಕುರಿ ಅಲ್ಲಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ.

ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿ ಹೊಲ ಹದಗೊಳಿಸಿ.  ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿರುವ ರೈತರ ಮುಖದಲ್ಲಿಗ ಆತಂಕದ ಛಾಯೆ ಮೂಡಿದೆ. ಮುಂಗಾರು ಬಿತ್ತನೆಗೆ ಇನ್ನೂ ಕೇವಲ ಒಂದೂವರೆ ತಿಂಗಳು ಮಾತ್ರ ಅವಕಾಶವಿದೆ. ಈ ಅವಧಿಯಲ್ಲಿಯೂ ಮಳೆ ಮುನಿಸಿಕೊಂಡರೆ ಹೇಗೆ ಎಂಬ ಚಿಂತೆ ರೈತರನ್ನು ಕಾಡುತ್ತಿದೆ. ಪರಸ್ಥಿತಿ ಹೇಗೆ  ಮುಂದುವರಿದರೆ ಬೀಜ ಗೊಬ್ಬರಕ್ಕಾಗಿ ಮಾಡಿದ ಸಾಲದ ಭಾರದ ಜೊತೆಗೆ ಹೊಟ್ಟೆ ತುಂಬಿಕೊಳ್ಳಲು ಗುಳೆ ಹೋಗುವುದು ಅನಿವಾರ್ಯವಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.