ADVERTISEMENT

ವಿಜ್ಞಾನದಿಂದ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2011, 8:05 IST
Last Updated 19 ಸೆಪ್ಟೆಂಬರ್ 2011, 8:05 IST

ಬೀಳಗಿ: ಸರಪಳಿಗಳಿಂದ ಭೂಮಿಯ ಮೋಜಣಿ ಮಾಡುವ ಕಾಲ ದೂರ ಸರಿದು ಸ್ಯಾಟ್‌ಲೈಟ್ ಮೂಲಕ ಭೂಮಾಪನ ಕಾರ್ಯ ನಡೆಯುವ ಮಟ್ಟಿಗೆ ವಿಜ್ಞಾನ ಮುಂದುವರಿದಿದೆ. ಭೂಮಾಪನ ಇಲಾಖೆಯು ವೈಜ್ಞಾನಿಕ ಆವಿಷ್ಕಾರವನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಂಡಿದೆ ಎಂದು ಭೂದಾಖಲೆಗಳ ಉಪ ನಿರ್ದೇಶಕಿ ಎನ್.ಎಂ. ಪೀರಜಾದೆ ಹೇಳಿದರು.

ಸ್ಥಳೀಯ ಎಸ್‌ವಿವಿ ಸಂಸ್ಥೆಯ ಸ್ವಾಮಿ ವಿವೇಕಾನಂದ ವಿಜ್ಞಾನ ಪಿಯು ಕಾಲೇಜು ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯನವರ 151ನೇ ಜಯಂತಿ ಅಂಗವಾಗಿ ಏರ್ಪಡಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ಕ್ಷಣ ಕ್ಷಣಕ್ಕೂ ಭೂಮಿಯ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಹತೋಟಿಗೆ ತರುವಂತಹ, ಪ್ರಚಲಿತ ಸಮಸ್ಯೆಗಳನ್ನು ಹೊಡೆದೋಡಿಸುವಂತಹ ಸಂಶೋಧನೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಸಂಶೋಧನೆಯತ್ತ ಆಸಕ್ತಿ ವಹಿಸುವುದು ಸೂಕ್ತ ಎಂದು ನುಡಿದರು.

ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕಿ ಜಾಸ್ಮಿನ್ ಕಿಲ್ಲೇದಾರ, ಪ್ರತಿಯೊಂದು ವಿಜ್ಞಾನ ಪಾಠವನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ರಾಜು ಬೋರ್ಜಿ, ಆರ್.ಎಸ್. ಪಾಟೀಲ ಭಾಗವಹಿಸಿದ್ದರು. ಜಿ.ಆರ್. ಪಾಟೀಲ ಸ್ವಾಗತಿಸಿದರು. ಎಂ.ಎಸ್. ಹಳ್ಳೂರ ವಂದಿಸಿದರು.

ವಿಸ್ಮಯ ವಿಜ್ಞಾನ: ಬಯಲಿನಲ್ಲಿ ರಾಕೆಟ್ ಹಾರಿಸಿದರು. ಅಣು ವಿಜ್ಞಾನವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರು. ತರಂಗಗಳ ಮೂಲಕ ರೇಡಿಯೋ, ಟಿ.ವಿ. ಕಾರ್ಯ ವೈಖರಿ ತೋರಿಸಿದರು. ಪೈಥಾಗೊರಸ್ ಸಿದ್ಧಾಂತ, ಆಕಾಶ ಗಂಗೆಯನ್ನು ತೋರಿಸುತ್ತಲೇ ಜ್ವಾಲಾ ಮುಖಿಯ ಸ್ಫೋಟದಿಂದ ನೋಡುಗರನ್ನು ಬೆಚ್ಚಿ ಬೀಳುವಂತೆ ಮಾಡಿದರು.
ಇವೆಲ್ಲವೂ ನಡೆದಿದ್ದು ಸ್ಥಳೀಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ. ವಿಜ್ಞಾನ ವಸ್ತು ಪ್ರದರ್ಶನಕ್ಕೆ ವಿದ್ಯಾರ್ಥಿಗಳು ತಾವೇ ತಯಾರಿಸಿ ತಂದಿದ್ದ ವೈಜ್ಞಾನಿಕ ಪ್ರಯೋಗಗಳನ್ನು ತೋರಿಸಿ, ಅವುಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಗಮನ ಸೆಳೆದರು. ವಿಜ್ಞಾನ ವಸ್ತು ಪ್ರದರ್ಶನದ ವೀಕ್ಷಣೆಗೆ ತಾಲ್ಲೂಕಿನ ವಿವಿಧ ಶಾಲೆಗಳಿಂದ ಮಕ್ಕಳು ಆಗಮಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.