ADVERTISEMENT

`ಶಿರಡಿ ಶ್ರೀ ಸಾಯಿಬಾಬಾ' ನಾಟಕ ಪ್ರದರ್ಶನ 16ರಿಂದ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:43 IST
Last Updated 15 ಡಿಸೆಂಬರ್ 2012, 8:43 IST

ಬಾಗಲಕೋಟೆ: ದಾವಣಗೆರೆಯ ಕೆ.ಬಿ.ಆರ್. ನಾಟಕ ಕಂಪನಿಯ ಕಲಾ ವಿದರು ಅಭಿನಯಿಸಿರುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡ ಭಕ್ತಿ ಪ್ರಧಾನ ನಾಟಕ `ಶಿರಡಿ ಶ್ರೀಸಾಯಿ ಬಾಬಾ' ನಾಟಕ ಇದೇ 16ರಿಂದ ನಗರದ ದರ್ಬಾರ್‌ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕುರಿತು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಾಟಕದ ನಿರ್ಮಾಪಕ ಚಿಂದೋಡಿ ಬಂಗಾರೇಶ, ಸುಮಾರು ರೂ.11 ಲಕ್ಷ ವೆಚ್ಚದಲ್ಲಿ ನಾಟಕವನ್ನು ನಿರ್ಮಿಸ ಲಾಗಿದ್ದು, ಇದೇ 16ರಂದು ಮಧ್ಯಾಹ್ನ 2.30ಕ್ಕೆ ಪ್ರಥಮ ಪ್ರದರ್ಶನ ಕಾಣಲಿದೆ ಎಂದರು.

ಕನ್ನಡ ವೃತ್ತಿ ರಂಗಭೂಮಿ ಇತಿಹಾಸದಲ್ಲೇ ಪ್ರಥಮ ಬಾರಿಗೆ `ಶಿರಡಿ ಶ್ರೀ ಸಾಯಿಬಾಬಾ' ಜೀವನ ಚರಿತ್ರೆ ಯನ್ನು ನಾಟಕ ರೂಪದಲ್ಲಿ ಪ್ರದರ್ಶಿ ಸುತ್ತಿರುವುದಾಗಿ ಹೇಳಿದರು.

ಈ ನಾಟಕವು ಪ್ರತಿದಿನ ಮಧ್ಯಾಹ್ನ 2.45 ಮತ್ತು ಸಂಜೆ 6.15ಕ್ಕೆ ಎರಡು ಪ್ರದರ್ಶನ ಮತ್ತು ಭಾನುವಾರ ಮಾತ್ರ ಬೆಳಿಗ್ಗೆ 11.30, ಮಧ್ಯಾಹ್ನ 2.30 ಮತ್ತು ಸಂಜೆ 6.30ಕ್ಕೆ ಮೂರು ಪ್ರದರ್ಶನ ಕಾಣಲಿದೆ ಎಂದರು.

ಶಿರಡಿ ಸಾಯಿಬಾಬಾ ಅವರು ಸಮಾಜವನ್ನು ತಿದ್ದುವ ಉದ್ದೇಶದಿಂದ ಜೀವಿತಾವಧಿಯಲ್ಲಿ ಮಾಡಿದ ಪವಾಡ ಗಳನ್ನು ನಾಟಕದಲ್ಲಿ ಅಳವಡಿಸಿ ಕೊಳ್ಳಲಾಗಿದೆ. ಸಾಯಿ ಬಾಬಾ ವಿಶ್ವರೂಪ ದರ್ಶನ, ಒಮ್ಮೆಗೆ ಸಾವಿರ ದೀಪಗಳು ಹತ್ತಿಕೊಳ್ಳುವ ದೃಶ್ಯ, ಕುದಿಯುತ್ತಿರುವ ಪಾತ್ರೆಗೆ ಕೈಹಾಕಿ ಅನ್ನ ತೆಗೆಯುವ ದೃಶ್ಯ, ಮಳೆ ಸುರಿಯುವ ದೃಶ್ಯ, ಬಾಬಾ ಖಂಡಯೋಗ ದರ್ಶನ(ದೇಹ ಮೂರು ಭಾಗವಾಗುವ ದೃಶ್ಯ) ಸೇರಿದಂತೆ ನಾಟಕದ ಸನ್ನಿವೇಶದಲ್ಲಿ ಕರಡಿ, ನಾಯಿ ಮತ್ತು ಕುದುರೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.

ಶಿರಡಿ ಸಾಯಿ ಬಾಬಾ ಪಾತ್ರದಲ್ಲಿ ಚಿಂದೋಡಿ ವಿಜಯಕುಮಾರ ಅಭಿನಯಿಸಲಿದ್ದು, ಒಟ್ಟು 40 ಕಲಾ ವಿದರು ನಾಟಕದಲ್ಲಿ ಅಭಿನಯಿಸಲಿದ್ದಾರೆ ಎಂದು ತಿಳಿಸಿದರು.

ನಾಟಕಕ್ಕಾಗಿಯೇ ಶಿರಡಿ ಸಾಯಿ ಬಾಬಾ ಅವರ ಎರಡು ಮೂರ್ತಿ ಮತ್ತು ಸಾಯಿಬಾಬಾ ಪಾತ್ರಧಾರಿ ವಿಜಯಕುಮಾರ ಅವರ ಒಂದು ಮೂರ್ತಿಯನ್ನು ಸಿದ್ಧಪಡಿಸಲಾಗಿದೆ ಎಂದರು.

ನಾಟಕ ಪ್ರದರ್ಶನದ ವೇಳೆ ಅನ್ನ ಪ್ರಸಾದ ನಡೆಯಲಿದೆ. ಅಲ್ಲದೇ, ಅಂಗವಿಕಲರಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ತಿಳಿಸಿದರು.

ದಾವಣಗೆರೆಯ ಕೆ.ಬಿ.ಆರ್.ನಾಟಕ ಕಂಪನಿಯ ಮಾಲೀಕ ಚಿಂದೋಡಿ ಶ್ರೀಕಂಠೇಶ, ವ್ಯವಸ್ಥಾಪಕ ಚಿಂದೋಡಿ ಶಂಭುಲಿಂಗಪ್ಪ, ಸಂಚಾಲಕ ಚಿಂದೋಡಿ ವಿಜಯಕುಮಾರ ಮತ್ತು ಮ್ಯಾನೇಜರ್ ಚಿಂದೋಡಿ ಕಿಶೋರಕುಮಾರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.