ADVERTISEMENT

ಸಾಲ ಮನ್ನಾ ಯೋಜನೆ: ಬಾಗಲಕೋಟೆ ಅಗ್ರ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 7:20 IST
Last Updated 14 ಆಗಸ್ಟ್ 2012, 7:20 IST

ಬಾಗಲಕೋಟೆ: ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಜಿಲ್ಲೆಯ ರೈತ ಸಮುದಾಯ ರಾಜ್ಯದಲ್ಲೇ ಹೆಚ್ಚು ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಜಿಲ್ಲೆಯ 1,62,427 ರೈತರು ಸಾಲ ಮನ್ನಾ ಯೋಜನೆಯ ಅರ್ಹತೆ ಪಡೆದುಕೊಂಡಿದ್ದು, ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ರೈತರು ತೆಗೆದುಕೊಂಡಿರುವ ರೂ. 403.36 ಕೋಟಿ ಬೆಳೆ ಸಾಲ ಮನ್ನಾವಾಗಲಿದೆ ಎಂದರು.

ಜಿಲ್ಲೆಯ 12,637 ರೈತರು ಎರಡು ಬಾರಿ ಸಾಲ ಪಡೆದುಕೊಂಡಿದ್ದಾರೆ. ಅಂತವರಿಗೆ ಒಂದು ಬಾರಿ ಪಡೆದುಕೊಂಡಿರುವ ಸಾಲ ಮಾತ್ರ ಮನ್ನಾ ಆಗಲಿದೆ. ಎರಡನೇ ಬಾರಿ ಪಡೆದ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಯಶಸ್ವಿನಿ ಶೇ. 79ರಷ್ಟು ಸಾಧನೆ: 2012-13ನೇ ಸಾಲಿನಲ್ಲಿ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯಡಿ 2.70 ಲಕ್ಷ ರೈತರನ್ನು ನೋಂದಾಯಿಸುವ ಗುರಿ ಹೊಂದಲಾಗಿತ್ತು. ಇದುವರೆಗೆ 2,15,109 ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದ ರೂ. 4.31 ಕೋಟಿ ಹಣ ಸಂಗ್ರಹವಾಗಿದ್ದು, ಅಪೆಕ್ಸ್ ಬ್ಯಾಂಕ್‌ಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಶೇ.79ರಷ್ಟು ಸಾಧನೆ ಮಾಡಲಾಗಿದೆ ಎಂದರು.

ಎನ್‌ಆರ್‌ಇಜಿ ಅತೃಪ್ತಿ: ಜಿಲ್ಲೆಯಲ್ಲಿ ಎನ್‌ಆರ್‌ಇಜಿ ಪ್ರಗತಿ ತೃಪ್ತಿದಾಯಕವಾಗಿಲ್ಲ ಎಂದ ಸಚಿವರು, ರೂ.32 ಕೋಟಿ ಅನುದಾನವಿತ್ತು. ರೂ.4.68 ಕೋಟಿ ಆರಂಭಿಕ ಸಿಲ್ಕು ಸೇರಿದಂತೆ ಒಟ್ಟು 36.69 ಕೋಟಿ ಇದೆ. ಇದುವರೆಗೆ ಕೇವಲ ರೂ.4.72 ಕೋಟಿ ಮಾತ್ರ ಖರ್ಚಾಗಿದೆ ಎಂದರು.

ಸೆಪ್ಟೆಂಬರ್ ಅಂತ್ಯದೊಳಗೆ ಶೇ.50ರಷ್ಟು ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಎನ್‌ಆರ್‌ಇಜಿಗೆ ಜಿಲ್ಲೆಯಲ್ಲಿ ಬೇಡಿಕೆ ಇಲ್ಲದ ಕಾರಣ ಪ್ರಗತಿ ಕುಂಠಿತವಾಗಿದೆ ಎಂದರು.
ಎನ್‌ಆರ್‌ಇಜಿ ಹಣದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ರೂ.9 ಸಾವಿರ ನೀಡಲಾಗುತ್ತಿದ್ದು, ಪ್ರತಿಯೊಂದು ಕುಟುಂಬವೂ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬರ ನಿರ್ವಹಣೆ: ಬರ ನಿರ್ವಹಣೆಗಾಗಿ ಇದುವರೆಗೆ ಜಿಲ್ಲೆಗೆ ರೂ.31 ಕೋಟಿ ಅನುದಾನ ಬಂದಿದೆ. ಇದರಲ್ಲಿ ರೂ.17.50ಕೋಟಿ ಖರ್ಚಾಗಿದೆ ಎಂದು ತಿಳಿಸಿದರು.

ಟ್ಯಾಂಕರ್ ಬಂದ್: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಐದು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಭರಾಜು ಮಾಡುತ್ತಿರುವುದನ್ನು ಇದೇ ಮಂಗಳವಾರದಿಂದ ಬಂದ್ ಮಾಡಲಾಗುವುದು ಎಂದರು.

ಜಲಾಶಯಗಳಲ್ಲಿ ನೀರು ಭರ್ತಿಯಾಗಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿರುವ ಕಾರಣ ಟ್ಯಾಂಕರ್ ನೀರಿನ ಅವಶ್ಯಕತೆ ಇಲ್ಲವಾಗಿದೆ ಎಂದು ಹೇಳಿದರು.

ಹೊಸ ಗೋಶಾಲೆ: ಜಿಲ್ಲೆಯಲ್ಲಿ ಇದುವರೆಗೆ 19ಗೋಶಾಲೆ ಆರಂಭಿಸಲಾಗಿದೆ. ನಿರ್ವಹಣೆಗೆ ರೂ.160 ಲಕ್ಷ ನೀಡಲಾಗಿದೆ. ಇದರ ಹೊರತಾಗಿ ಬೇಡಿಕೆ ಇರುವ ಮುಗಳೊಳ್ಳಿ, ಹೊಸೂರು, ಕಟಗೇರಿ, ಫಕೀರಬೂದಿಹಾಳ, ಗದ್ಯಾಳದಲ್ಲಿ ಹೊಸದಾಗಿ ಗೋಶಾಲೆ ಆರಂಭಿಸಲಾಗುವುದು ಎಂದರು.

ವಾರ ಗಡುವು: ಪ್ರತಿ ಗ್ರಾಮ ಪಂಚಾಯಿತಿಗಳು ವಾರದೊಳಗೆ ಕ್ರಿಯಾಯೋಜನೆ ಮತ್ತು ಅಂದಾಜು ಪತ್ರಿಕೆ ಸಿದ್ದಪಡಿಸಬೇಕು ಹಾಗೂ 15 ದಿನದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.

21ಕ್ಕೆ ಇಲಾಖಾವಾರು ಸಭೆ:
ಇದೇ 21ರಿಂದ ಇಲಾಖಾವಾರು ಪ್ರಗತಿ ಪರಿಶೀಲನೆ ಹಾಗೂ ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಖಂಡನೆ: ಶ್ರೀಮಂತರು, ನೇಕಾರರಲ್ಲದವರು ಬಡ ನೇಕಾರ ಸಾಲ ಮನ್ನಾ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಾಂತರ ರೂಪಾಯಿ ವಂಚಿಸಿರುವ ಪ್ರಕರಣವನ್ನು ಸಚಿವರು ತೀವ್ರವಾಗಿ ಖಂಡಿಸಿದರು.

ಧಕ್ಕೆಯಾಗದಂತೆ ಕ್ರಮ: ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಯಾವುದೇ ಧಕ್ಕೆಯಾಗದಂತೆ ಸರ್ಕಾರ ಗಮನ ಹರಿಸಲಿದೆ. ಶಿವಮೊಗ್ಗ ಮಿಶ್ರ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ ಅಂತಿಮ ತೀರ್ಮಾನ ಇನ್ನೂ ಆಗಿಲ್ಲದಿರುವ ಕಾರಣ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ, ಜಿ.ಪಂ. ಸಿಇಒ ಎಸ್.ಜಿ. ಪಾಟೀಲ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.