ADVERTISEMENT

`ಸಾಹಿತ್ಯ ಅನುಭವಿಸಲು ಜನಕ್ಕಿಲ್ಲ ಪುರಸೊತ್ತು'

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 9:06 IST
Last Updated 24 ಡಿಸೆಂಬರ್ 2012, 9:06 IST

ಬಾಗಲಕೋಟೆ: ಸಾಹಿತ್ಯವೆಂಬುದು ಸಮಾಜದ ಸಂಪತ್ತು, ಇದರಾಳಕೆ ಇಳಿದರೆ ಬಾರದು ಆಪತ್ತು, ದೂರವಾಗುವುದು ಎಲ್ಲ ವಿಪತ್ತು. ಆದರೆ, ಇದನ್ನು ಅನುಭವಿಸಲು ಮನುಷ್ಯನಿಗೆ ಎಲ್ಲಿದೆ ಪುರಸೊತ್ತು ಎಂದು ಕವಯತ್ರಿ ಹೇಮಾ ದೇಸಾಯಿ ಹೇಳಿದರು.
ರಂಗಕೋಟೆ ಬಾಗಿಲುಕೋಟೆ ಹಾಗೂ ಜನಪರ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ಇತ್ತೀಚೆಗೆ ನಡೆದ `ಸಾಹಿತ್ಯ ಸಂಜೆ' ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಮಕ್ಕಳ ಬಾಲ್ಯದ ಸಂಸ್ಕಾರದಲ್ಲಿ ತಂದೆ ತಾಯಿಯ ಪಾತ್ರ ಬಹುಮುಖ್ಯವಾದುದು, ಅವರೊಳಗಿನ ಸೃಜನಾತ್ಮಕ ಕಲೆಯನ್ನು ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಭವಿಷ್ಯತ್ತಿನಲ್ಲಿ ಅವರು ಬಹುದೊಡ್ಡ ಪ್ರತಿಭಾವಂತರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.

ನಂದಿನಿ ಪಿ.ಹೊಸಮನಿ ಅವರ  `ಜನಪ್ರಿಯ ಗ್ರಾಮೀಣ ಗಾದೆ ಮಾತು'ಗಳು  ಕೃತಿ ಕುರಿತು ಶರಣಪ್ಪ ಚಲವಾದಿ ಮಾತನಾಡಿ, ಆತ್ಮ ವಿಶ್ವಾಸಮೂಡಿಸುವ, ಚಂಚಲತೆ ಹೋಗಲಾಡಿಸುವ, ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ಸಂದೇಶ ನೀಡುವ ಗಾದೆ ಮಾತುಗಳು ಇಲ್ಲಿದ್ದು, ಇವುಗಳನ್ನು ಸಂಗ್ರಹಿಸಿಕೊಟ್ಟ ನಂದಿನಿಯ ಸಾಧನೆ ಅಭಿನಂದನಾರ್ಹವಾದುದು  ಎಂದರು.

ಪಿ.ಆರ್.ಹೊಸಮನಿ ಅವರ  `ಗಣೇಶನ ಮಹಿಮೆ'  ನಾಟಕ ಕೃತಿ ಕುರಿತು ವಿನೋದ ಯಡಹಳ್ಳಿ , ಮಹಾದೇವಿ ಪಿ. ಹೊಸಮನಿ ಅವರ  `ದೇವಿ ನೀನು ಒಲಿದು ಬಾ'  ಕೃತಿ ಕುರಿತು ಪಿ. ಆರ್.ಸಣ್ಣಪ್ಪನವರ ಮಾತನಾಡಿದರು.

ಮಲ್ಲಿಕಾರ್ಜುನ ಪಲ್ಲೇದ ಮಾತ ನಾಡಿ, ಸಾಹಿತಿಗಳು ಮಿತಿಯೇ ಇಲ್ಲದ ಚಿರಂಜೀವಿಗಳು, ಸಮಾಜ ತಿದ್ದುವ ಕಾರ್ಯದಲ್ಲಿ ಸಾಹಿತಿಗಳ ಪಾತ್ರ ಮುಖ್ಯವಾಗಿದೆ  ಎಂದರು.

ರಂಗಕೋಟೆ ಬಾಗಿಲುಕೋಟೆ ಗೌರ ವಾಧ್ಯಕ್ಷ ಡಾ.ಪ್ರಕಾಶ ಖಾಡೆ ಪ್ರಾಸ್ತಾ ವಿಕ ಮಾತನಾಡಿದರು. ಉಮೇಶ ತಿಮ್ಮೋಪುರ, ನಾರಾಯಣ ಯಳ್ಳಿಗುತ್ತಿ  ಸಾಹಿತ್ಯ ಸಂಜೆ  ರೂಪರೇಷೆ ಹೇಳಿದರು.

ವಿಕ್ರಮ ಬಸನಗೌಡರ,  ಮಲ್ಲಿಕಾರ್ಜುನ ಚಲವಾದಿ, ಎಸ್,ಜಿ ತೇಲಿ, ಪಾಂಡುರಂಗ ಸಣ್ಣಪ್ಪನವರ, ಎಲ್. ಎಚ್.ಬೆಣ್ಣೂರ,ಪಿಯು.ರಾಠೋಡ, ಎಸ್.ಜಿ.ಸುನಗದ, ಎಂ.ಎನ್. ಗುಜಮಾಗಡಿ, ಸಂಗೀತಾ ಶಿಕ್ಕೇರಿ, ಎಸ್.ಆರ್.ಲಮಾಣಿ, ಎಸ್, ಎಚ್, ದಂಡಣ್ಣವರ, ರಾಜೇಶ ಮನಗೂಳಿ, ಭೀಮಶೀ ಯಡಹಳ್ಳಿ, ಡಾ.ಬದರೀನಾಥ ಜಹಗೀರದಾರ, ಎಸ್.ಎಚ್.ಕಿರಸೂರ,ಬಿ.ಎಸ್.ಹೊಸ ಗೌಡರ, ನವೀನ ಹೊಸಮನಿ, ಪಿ.ಡಿ. ಬಿರಾದಾರ, ಎಸ್.ಎಲ್.ಸಂಗಣ್ಣವರ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಪಡೆದ ನಂದಿನಿ ಹೊಸಮನಿ ಅವರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.