ಹುನಗುಂದ: ‘ಸಾರಿಗೆ ಸಂಸ್ಥೆ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಸುತ್ತಿದೆ ಹೊರತು ಅದಕ್ಕೆ ಲಾಭಾಂಶ ಮುಖ್ಯವಲ್ಲ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಹೇಳಿದರು.
ಪಟ್ಟಣದ ನೂತನ ಬಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು,ಸುದ್ಧಿಗಾರರೊಂದಿಗೆ ಮಾತನಾಡಿದರು. ಈ ಭಾಗದ ಬಹು ದಿನದ ಬೇಡಿಕೆಯಾದ ಡಿಪೊಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ 50 ಶೆಡ್ಯೂಲ್ನಲ್ಲಿ 24 ವೇಗದೂತ, 26 ನಿಧಾನಗತಿ ಬಸ್ ಸಂಚಾರ ಆರಂಭವಾಗಲಿದೆ. ರಾಜ್ಯದ ಯಾವುದೇ ಭಾಗದಲ್ಲಿಯ ಬಸ್ ವೇಳಾಪಟ್ಟಿ, ಬಸ್ ಬಿಟ್ಟಿರುವ ವೇಳೆ, ತಲುಪಬಹುದಾದ ಸಮಯ ನಿಮ್ಮ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾಗಿದೆ. ಬಸ್ ನಿಲ್ದಾಣ, ಬಸ್ಗಳಲ್ಲಿ ವೈಫೈ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಅವಘಡಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದರು.
ಜನರ ಬೇಡಿಕೆ ಹಿನ್ನೆಲೆಯಲ್ಲಿ ಹುನಗುಂದ ಧರ್ಮಸ್ಥಳ ನಡುವೆ ಪ್ರತಿ ದಿನವೂ ಬಸ್ ಓಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು. ಬಸ್ ನಿಲ್ದಾಣದ ವಾಣಿಜ್ಯ ಮಳಿಗೆ ದುರಸ್ತಿಗೆ ಸೂಚಿಸಿದರು. ಹುನಗುಂದ ಬಸ್ ಡಿಪೊಗಾಗಿ ಹೋರಾಡಿದ ಜಿ.ಜಿ. ಕಂಬಾಳಿಮಠ ಅವರನ್ನು ಡಂಗನವರ ಅಭಿನಂದಿಸಿದರು.
ವಿಭಾಗೀಯ ಸಾರಿಗೆ ನಿಯಂತ್ರಕ ಪಿ.ವಿ.ಮೇತ್ರಿ, ಸಹಾಯಕ ಎಂಜಿನಿಯರ್ ಶ್ರೀನಿವಾಸ, ಕನ್ನಡ ಪ್ರಾಧಿಕಾರದ ಸದಸ್ಯ ಮಹಾದೇವ ಹಟ್ಟಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.