ಬನಹಟ್ಟಿ: ರಾಜ್ಯದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ಮೊದಲು ಶೌಚಾಲಯ ಮತ್ತು ಶುದ್ಧ ಕುಡಿಯುವ ನೀರಿಗೆ ಮೊದಲ ಅದ್ಯತೆ ನೀಡಿದೆ. ಅದರಲ್ಲೂ ಮಕ್ಕಳ ಹಿತದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು ಅವಶ್ಯ. ಶುದ್ಧವಾದ ನೀರು, ಗಾಳಿ ಮತ್ತು ಆಹಾರದಿಂದ ಉತ್ತಮ ಸಮಾಜ ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದರು.
ಭಾನುವಾರ ಸಮೀಪದ ಆಸಂಗಿ ಗ್ರಾಮದ ಗ್ರಾಮ ಪಂಚಾಯಿತಿ ವತಿಯಿಂದ 2012–13 ಮತ್ತು 13–14ನೇ ಸಾಲಿನ ಹಣಕಾಸು ಯೋಜನೆ ಅಡಿಯಲ್ಲಿ ₨ 4ಲಕ್ಷ 60 ಸಾವಿರ ವೆಚ್ಚದಲ್ಲಿ ಶುದ್ಧ ಕುಡಿಯವ ನೀರಿನ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ರಾಜ್ಯ ಸರ್ಕಾರ ಆರು ಲಕ್ಷ ಶೌಚಾಲಯ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ಈಗಾಗಲೇ 2 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಹೆಣ್ಣು ಮಕ್ಕಳ ವಿಷಯದಲ್ಲಿ ಸಾಮೂಹಿಕ ಶೌಚಾಲಯಕ್ಕಿಂತ ವೈಯಕ್ತಿಕ ಶೌಚಾಲಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯನ್ನು ಮೂಡಿಸಬೇಕು ಮತ್ತು ಸಾರ್ವಜನಿಕರು ಶೌಚಾಲಯಗಳನ್ನು ಬಳಸುವಂತೆ ಸಚಿವೆ ಉಮಾಶ್ರೀ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಬಡೇಮಿ, ಉಪಾಧ್ಯಕ್ಷ ಪಾಂಡುರಂಗ ಸಾಲ್ಗುಡೆ, ಮಲ್ಲಪ್ಪ ಸವದತ್ತಿ, ದಾವಲಸಾಬ ಆಸಂಗಿ, ಅಲ್ಲಪ್ಪ ಸವದತ್ತಿ, ಧೂಪದಾಳ, ಕಾರ್ಯದರ್ಶಿ ಶಿವಯ್ಯ ಮಠದ ಉಪಸ್ಥಿತರಿದ್ದರು.
ನೀರು ಸರಬರಾಜು ಯೋಜನೆಗೆ ಶಂಕು ಸ್ಥಾಪನೆ: ಸಮೀಪದ ಕುಲಹಳ್ಳಿ ಗ್ರಾಮದ ಗೊಂಬಿಗುಡ್ಡ ವಸತಿ ನೀರು ಸರಬರಾಜು ಅಂದಾಜು ₨10 ಲಕ್ಷ ವೆಚ್ಚದ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಶಂಕು ಸ್ಥಾಪನೆ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ಭಂಡಾರಿ, ಜಿಲ್ಲಾ ಪಂಚಾಯಿತಿಯ ಎಂಜಿನಿಯರ್ ಬಸವರಾಜ ಹಿಟ್ನಳ್ಳಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎಸ್. ರೂಗಿ, ಕಾರ್ಯದರ್ಶಿ ಎನ್.ಎಸ್. ಪತ್ರಿ, ರಾಯಪ್ಪ ಪೂಜಾರಿ, ಶಿವಲಿಂಗಯ್ಯ ಮಠಪತಿ, ಶಿವಪ್ಪ ತಂಬಾಕು, ವಿರಪಯ್ಯ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.