ಮಹಾಲಿಂಗಪುರ: ಪ್ರಸಕ್ತ ಸಾಲಿನ ಕಬ್ಬಿನ ದರವನ್ನು ಘೋಷಿಸಬೇಕೆಂದು ರೈತ ಸಂಘದ ಸದಸ್ಯರು ಮಂಗಳವಾರ ಸಮೀಪದ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ರೈತ ಸಂಘದ ರಾಜ್ಯ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಕಾರ್ಖಾನೆ ಪ್ರಾರಂಭವಾಗಿ ಎರಡು ತಿಂಗಳು ಕಳೆಯಿತು. ಇಂದಿಗೂ ಪ್ರಸಕ್ತ ಸಾಲಿನ ದರವನ್ನು ಘೋಷಿಸಿಲ್ಲ.
ನೆರೆಯ ಬೆಳಗಾವಿ ಜಿಲ್ಲೆಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಯವರು ಪ್ರಸಕ್ತ ಸಾಲಿನಲ್ಲಿ ₹ 3,150 ದರವನ್ನು ಘೋಷಿಸಿದ್ದಾರೆ. ಅದೇ ದರವನ್ನು ನಮ್ಮ ಜಿಲ್ಲೆಯ ಕಾರ್ಖಾನೆಗಳು ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಚಿನ್ನಪ್ಪ ಪೂಜೇರಿ ಮಾತನಾಡಿ, ನಾಲ್ಕು ದಿನಗಳಲ್ಲಿ ಕಾರ್ಖಾನೆಗಳು ದರವನ್ನು ಘೋಷಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಭಾಲಚಂದ್ರ ಬಕ್ಷಿ ಮಾತನಾಡಿ, ಜ.13ರವರೆಗೆ ಕಾಲಾವಕಾಶ ನೀಡಿ. ಅಷ್ಟರಲ್ಲಿ ಸೂಕ್ತ ದರ ಘೋಷಿಸುವುದಾಗಿ ಭರವಸೆ ನೀಡಿದರು.
ಮಹಾಲಿಂಗಪುರ ಠಾಣಾಧಿಕಾರಿ ರವಿಕುಮಾರ ಧರ್ಮಟ್ಟಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.
ಬಂದು ಪಕಾಲಿ, ಶ್ರೀಶೈಲ ಅಂಗಡಿ, ಮಲ್ಲಪ್ಪ ಅಂಗಡಿ, ಖಲೀಲ ಮುಲ್ಲಾ, ಕರೆಪ್ಪ ಮೇಟಿ, ಭೀಮಸಿ ಗಡದಿ, ದಾನಯ್ಯ ಮಠಪತಿ, ಸತ್ಯಪ್ಪ ಮಲ್ಲಾಪೂರ, ಗುರುನಾಥ ಹುಕ್ಕೇರಿ, ಈರಣ್ಣ ಸಸಾಲಟ್ಟಿ, ಅರ್ಜುನ ಬಂಡಿವಡ್ಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.