ವಡವಡಗಿ (ಬಸವನಬಾಗೇವಾಡಿ): ಗ್ರಾಮದ ಕಾಳಿಕಾಂಬಾ ಶಕ್ತಿಪೀಠದ ಶಿವಾನಂದ ಆಶ್ರಮದ ರಥೋತ್ಸವ ಈಚೆಗೆ ಸಂಭ್ರಮದಿಂದ ನಡೆಯಿತು.
ಮೂರು ವರ್ಷಗಳಿಂದ ಮಹಿಳೆಯರೇ ರಥ ಎಳೆಯುತ್ತಿರುವುದು ಈ ಜಾತ್ರೆಯ ವಿಶೇಷ. ಗ್ರಾಮದಲ್ಲಿ ಜನಿಸಿ ಬೆಳೆದು ಮದುವೆಯಾಗಿ ಗಂಡನ ಮನೆಗೆ ತೆರಳಿದ ಗ್ರಾಮದ ಎಲ್ಲ ಹೆಣ್ಣುಮಕ್ಕಳನ್ನು ಕರೆಯಿಸಿ ಅವರಿಂದ ರಥ ಎಳೆಸುವ ಪರಂಪರೆಯನ್ನು ಬಸವರಾಜ ಶರಣರು ಆರಂಭಿಸಿದ್ದಾರೆ. ಜಾತ್ರೆ ನಡೆಯುವ ಎರಡು ಮೂರು ದಿನ ಮೊದಲು ತವರು ಮನೆಗೆ ಬರುವ ಮಹಿಳೆಯರನ್ನು ದೇವಸ್ಥಾನದ ಆವರಣದಲ್ಲಿ ಉಡಿ ತುಂಬಿ ಸ್ವಾಗತಿಸುವುದು ಮತ್ತೊಂದು ವಿಶೇಷ.
ಗ್ರಾಮಸ್ಥರು ಬೆಳಿಗ್ಗೆಯಿಂದ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಬಂದು ದೇವಿಗೆ ಪೂಜೆ ಸಲ್ಲಿಸಿ, ತಮ್ಮ ಹರಕೆ ತೀರಿಸಿದರು. ಸಂಜೆ ಬಸವರಾಜ ಶರಣರ ನೇತೃತ್ವದಲ್ಲಿ ಸಿದ್ಧರಾಮ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ಬೃಂಗೀಶ್ವರ ಸ್ವಾಮೀಜಿ, ವೀರಗಂಗಾಧರ ಸ್ವಾಮೀಜಿ, ಮಹೇಶ್ವರಾನಂದ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನಂತರ ಮಹಿಳೆಯರು ಜಯಘೋಷಗಳೊಂದಿಗೆ ರಥ ಎಳೆದರು.
ರಥೋತ್ಸವದಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕೆ.ಗಂಗಾಧರ, ಸಿದ್ದನಗೌಡ ನಾಡಗೌಡ, ಸಂಗಪ್ಪ ಬಡಿಗೇರ, ಭೀಮರಾಯ ಚಿಮ್ಮಲಗಿ, ಕಾಳಿಂಗಪ್ಪ ಮುನುವಾಚಾರಿ, ಆರ್.ಬಿ.ಗಂವಾರಮಠ, ರಾಜಶೇಖರ ಮುರಾಳ, ಮಹಾದೇವಪ್ಪ ಹೊಸಗೌಡರ, ಚನ್ನಣ್ಣ ತಳೇಕಾರ, ಬಸವರಾಜ ಡೆಂಗಿ, ಬಸವರಾಜ ಗಂಗಶೆಟ್ಟಿ, ನಾಗಪ್ಪ ಗಂಗಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.