ಬಾಗಲಕೋಟೆ: ಕ್ರೈಸ್ತ ಸಮುದಾಯದವರ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಾ, ನಾಡಿನಲ್ಲಿ ಶಾಂತಿ ಕದಡುತ್ತಿರುವ ದುಷ್ಕರ್ಮಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಜಿಲ್ಲಾಡಳಿತ ಭವನದ ಎದುರು ನೆರೆದ ಪ್ರತಿಭಟನಾಕಾರರು, ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುತ್ತಿರುವ ಮತೀಯವಾದಿಗಳ ವಿರುದ್ಧಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಕ್ರೈಸ್ತ ಸಮುದಾಯದವರು ಈ ನೆಲದಲ್ಲಿ ಶತಮಾನಗಳಿಂದ ಸೌಹಾರ್ದವಾಗಿ ಬದುಕುತ್ತಿದ್ದಾರೆ. ಶಾಂತಿ, ಸಹಬಾಳ್ವೆ ಮೂಲಕ ಎಲ್ಲರ ಜೊತೆಯೂ ಹೊಂದಿಕೊಂಡು ಜೀವನ ಮಾಡುತ್ತಿದ್ದಾರೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜನರ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದ್ದಾರೆ. ಅದನ್ನು ಸಹಿಸದ ಕೆಲವರು ಮತಾಂತರ ನೆಪದಲ್ಲಿ ಪಾದ್ರಿಗಳು ಹಾಗೂ ಕ್ರೈಸ್ತ ಸಮುದಾಯದವರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಚರ್ಚ್, ಪ್ರಾರ್ಥನಾ ಮಂದಿರಗಳಿಗೂ ಹಾನಿ ಮಾಡುತ್ತಿದ್ದಾರೆ. ಹೀಗೆ ಶಾಂತಿ ಕದಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
’ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಸಭೆಯಲ್ಲಿ ದೇಶದ ಸಾಮರಸ್ಯಕ್ಕೆ ಧಕ್ಕೆ ತರುವ ಹೇಳಿಕೆಗಳನ್ನು ಕೆಲವರು ನೀಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ಇಂತಹ ಚಟುವಟಿಕೆಗಳಿಗೆ ಪರೋಕ್ಷ ಬೆಂಬಲ ನೀಡುತ್ತಾ ಬರುತ್ತಿದೆ. ಅಲ್ಪಸಂಖ್ಯಾತರನ್ನು ಕೊಲೆ ಮಾಡುವುದಾಗಿ ಮಾತನಾಡಿರುವವರ ವಿರುದ್ಧ ಕೇಂದ್ರ ಸರ್ಕಾರ ಗೂಂಡಾ ಮತ್ತು ಯುಎಪಿಎ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು‘ ಎಂದು ಆಗ್ರಹಿಸಿದರು.
ಸಂಸದ ತೇಜಸ್ವಿಸೂರ್ಯ ಪದೇ ಪದೇ ಅಸಹಿಷ್ಣು ಮಾತುಗಳನ್ನು ಆಡುವ ಮೂಲಕ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಮಂಡ್ಯ ಜಿಲ್ಲೆ ಪಾಂಡವರಪುರ, ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಕ್ರಿಸ್ಮಸ್ ಆಚರಣೆ ವೇಳೆ ದಾಳಿ ನಡೆಸಿ ತೊಂದರೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿಮಾಜಿ ಸಚಿವ ಎಚ್.ವೈ.ಮೇಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ರಾಜು ಮನ್ನಿಕೇರಿ, ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಮುಖಂಡರಾದ ಎ.ಎ.ದಂಡಿಯಾ, ಅಬುಶಮಾ ಖಾಜಿ, ಎಂ.ಬಿ.ಸೌದಾಗರ, ಎಸ್.ಎನ್.ರಾಂಪುರೆ, ಸಲೀಂ ಶೇಖ್, ಬಾಬು ಇಟಗಿ, ಚನ್ನವೀರ ಅಂಗಡಿ, ರಜಾಕ್ ಬೆನೂರ ಮತ್ತಿತರರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.