ಬಾದಾಮಿ: ಪಟ್ಟಣ ಮತ್ತು ಸುತ್ತಲಿನ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ ಗುಡುಗಿನೊಂದಿಗೆ ಗಂಟೆ ಕಾಲ ರಭಸದಿಂದ ಮಳೆ ಸುರಿಯಿತು. ಮಧ್ಯಾಹ್ನ ಒಂದು ಗಂಟೆಯವರೆಗೆ ಜಿಟಿ ಜಿಟಿ ಮಳೆ ಮುಂದುವರೆಯಿತು.
ಮಳೆಯಿಂದ ಮಾರುಕಟ್ಟೆಗೆ ಗ್ರಾಹಕರು ಬರಲಿಲ್ಲ. ವ್ಯಾಪಾರ ವಹಿವಾಟು ಮಧ್ಯಾಹ್ನದವರೆಗೆ ಸ್ಥಗಿತವಾಗಿತ್ತು ಸತತ ಮಳೆಯಿಂದ ಬೆಟ್ಟದ ಜೋಡಿ ಜಲಧಾರೆಗಳು ಮತ್ತು ಕಾರಂಜಿಯ ನೀರು ನಿರಂತರ ಐದು ಗಂಟೆ ಕಾಲ ಧುಮ್ಮಿಕ್ಕುತ್ತ ಅಗಸ್ತ್ಯತೀರ್ಥ ಹೊಂಡಕ್ಕೆ ಸಂಗ್ರಹವಾಯಿತು.
ಹಿಂಗಾರು ಕೃಷಿ ಚಟುವಟಿಕೆಗಳು ವಾರದಿಂದ ಸ್ಥಗಿತಗೊಂಡಿವೆ. ‘ಮಳಿ ಆಗಿ ಹೊಲದಾಗ ನೀರು ನಿಂತಾವ ಹೊಲಕ ಹೋಗುವಂಗಿಲ್ಲ. ಹೊಲದ ಕೆಲಸ ಎಲ್ಲಾವೂ ನಿಂತಬಿಟ್ಟಾವ ’ ಎಂದು ರೈತ ಬಸಪ್ಪ ಹೇಳಿದರು.
‘ಪ್ರಾಥಮಿಕ ವರದಿಯಂತೆ ತಾಲ್ಲೂಕಿನಲ್ಲಿ ಗುರುವಾರ ಮತ್ತು ಶುಕ್ರವಾರದ ಮಳೆಗೆ ಅಂದಾಜು 11 ಮನೆಗಳು ಭಾಗಶಃ ಹಾನಿಯಾಗಿವೆ. ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 8 ಸಾವಿರ ಕ್ಯುಸೆಕ್ ನೀರು ಬಿಡಲಾಗಿದೆ. ನೀರು ಕಡಿಮೆಯಾದ ನಂತರ ಬೆಳೆ ಹಾನಿ ಸರ್ವೇ ಮಾಡಲಾಗುವುದು’ ಎಂದು ತಹಶೀಲ್ದಾರ್ ಮಧುರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.