ಬಾದಾಮಿ: ಇಲ್ಲಿನ ಪುರಸಭೆಯ ಸಭಾಭವನದಲ್ಲಿ 2025–26ನೇ ಸಾಲಿನ ವಾರ್ಷಿಕ ಬಜೆಟ್ನ್ನು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಮಂಗಳವಾರ ಮಂಡಿಸಿದರು.
ವಿವಿಧ ಮೂಲಗಳಿಂದ ಒಟ್ಟು ₹29.48 ಕೋಟಿ ಆದಾಯ ಮತ್ತು ಒಟ್ಟು ₹29.45 ಕೋಟಿ ಖರ್ಚು ನಿರೀಕ್ಷಿಸಲಾಗಿದ್ದು, ₹2.96 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಯಿತು.
ಬಜೆಟ್ ಮಂಡನೆಯಾಗುವ ಮುನ್ನವೇ ಬಿಜೆಪಿ ಸದಸ್ಯ ನಾಗರಾಜ ಕಾಚಟ್ಟಿ, ‘ಆರು ತಿಂಗಳಿಂದ ಸದಸ್ಯರ ಸಭೆ ಕರೆದಿಲ್ಲ. ಹಿಂದಿನ ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ ಎಂಬುದಕ್ಕೆ ಬಜೆಟ್ ಪೂರ್ವಭಾವಿಯಾಗಿ ಸಭೆ ಕರೆದು ಚರ್ಚಿಸಲಿಲ್ಲ ಯಾಕೆ?’ ಎಂದು ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
‘ಹಿಂದಿನ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಈ ಬಜೆಟ್ನಲ್ಲಿ ಸೇರಿಸಲಾಗಿದೆ’ ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಸ್ಪಷ್ಟಪಡಿಸಿದರು.
‘ಪ್ರವಾಸಿಗರಿಗೆ ಮೂಲ ಸೌಕರ್ಯ ಕಲ್ಪಿಸಲು ಐತಿಹಾಸಿಕ ಪ್ರವಾಸಿ ತಾಣದ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ’ ಎಂದು ನಾಗರಾಜ ಕಾಚಟ್ಟಿ ಆರೋಪಿಸಿದರು. ‘ಕೇಂದ್ರ ಸರ್ಕಾರದ ₹77 ಲಕ್ಷದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು’ ಎಂದು ಅಧ್ಯಕ್ಷ ಕಟ್ಟಿಮನಿ ಸಭೆಯಲ್ಲಿ ತಿಳಿಸಿದರು.
‘ಪ್ರವಾಸಿಗರಿಗೆ ಪುರಸಭೆ ನಿವೇಶನದಲ್ಲಿ ನಗರೋತ್ಥಾನದ ಯೋಜನೆಯ ₹46 ಲಕ್ಷದಲ್ಲಿ ಶೌಚಾಲಯ ಮತ್ತಿತರ ಮೂಲ ಸೌಕರ್ಯದ ಕಾಮಗಾರಿಯನ್ನು ಕೈಗೊಳ್ಳಬಹುದು’ ಎಂದು ಪುರಸಭೆ ಸದಸ್ಯ ಮಂಜುನಾಥ ಹೊಸಮನಿ ತಿಳಿಸಿದರು.
‘ಪಟ್ಟಣದ ಮುಖ್ಯ ರಸ್ತೆಯನ್ನು ಅಗೆದು ಶಾಶ್ವತ ಕುಡಿಯುವ ನೀರಿನ ಕೊಳವೆಯನ್ನು ಜೋಡಿಸಲಾಗಿತ್ತು. ಅಗೆದ ರಸ್ತೆಗೆ ಈಚೆಗೆ ಲೋಕೋಪಯೋಗಿ ಇಲಾಖೆಯು ಸಿಮೆಂಟ್ ಕಾಮಗಾರಿ ಮಾಡಿದ್ದು, ಅದು ಕಳಪೆಯಾಗಿದೆ’ ಎಂದು ಬಿಜೆಪಿ ಸದಸ್ಯ ರೆಹಮಾನ ಕೆರಕಲಮಟ್ಟಿ ಆಕ್ಷೇಪಿಸಿದಾಗ ಇಲಾಖೆಗೆ ದೂರು ನೀಡುವಂತೆ ಕಾಂಗ್ರೆಸ್ ಸದಸ್ಯರು ತಿಳಿಸಿದರು. ಈ ವೇಳೆ ಸದಸ್ಯರು ಮೇಜು ತಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ, ಕೆಲಕಾಲ ಗದ್ದಲ ಉಂಟಾಯಿತು.
‘ಐಡಿಎಸ್ಎಂಟಿ ಯೋಜನೆಯಲ್ಲಿ ಪುರಸಭೆ ನಿರ್ಮಿಸಿದ ಅನೇಕ ಮಳಿಗೆಗಳು ಖಾಲಿ ಇವೆ. ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಮೂತ್ರಾಲಯಕ್ಕಾಗಿ ಬಳಸುತ್ತಿದ್ದಾರೆ. ಯಾರಿಗಾದರೂ ಬಾಡಿಗೆ ಕೊಡಿ ಪುರಸಭೆಗೆ ಆದಾಯ ಬರುವುದು’ ಎಂದು ಮಹಾಂತೇಶ ತಳವಾರ ಸಭೆಯಲ್ಲಿ ಒತ್ತಾಯಿಸಿದರು.
‘ಅನೇಕ ವರ್ಷಗಳಿಂದ ವರ್ತಕರು ಪುರಸಭೆ ಮಳಿಗೆಯಲ್ಲಿ ಬಾಡಿಗೆ ಇದ್ದಾರೆ. ಕೆಲವರು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆ ಕೊಟ್ಟಿದ್ದಾರೆ. ಇದರಿಂದ ಪುರಸಭೆಗೆ ಹಾನಿಯಾಗಿದೆ. ಈ ಬಗ್ಗೆ ಅನೇಕ ಬಾರಿ ಸಭೆಯಲ್ಲಿ ತಿಳಿಸಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ರಾಮವ್ವ ಪೂಜಾರ ಆಕ್ಷೇಪ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರದ ಪಾರಂಪರಿಕ ಯೋಜನೆಯಲ್ಲಿ 16ನೇ ವಾರ್ಡಿನಲ್ಲಿ ರಸ್ತೆಗೆ ಕಲ್ಲು ಜೋಡಿಸಿದ್ದಾರೆ. ವೃದ್ಧರು, ಮಕ್ಕಳು ಸಂಚರಿಸಲು ತೊಂದರೆಯಾಗುತ್ತಿದೆ. ಅನೇಕ ಬಾರಿ ಪುರಸಭೆಗೆ ತಿಳಿಸಿದರೂ ಯಾರೂ ಇತ್ತ ಗಮನ ಹರಿಸಲಿಲ್ಲ’ ಎಂದು ಸದಸ್ಯೆ ಪದ್ಮಾವತಿ ಕೆರಿಹೊಲದ ದೂರಿದರು.
ಸ್ಥಳಕ್ಕೆ ಭೇಟಿ ನೀಡಿ ರಸ್ತೆ ಸುಧಾರಣೆ ಮಾಡುವುದಾಗಿ ಪುರಸಭೆ ಮುಖ್ಯಾಧಿಕಾರಿ ಬಿ.ಎಂ. ಡಾಂಗೆ ಉತ್ತರಿಸಿದರು. ಪುರಸಭೆ ಸದಸ್ಯರು ಮತ್ತು ಸಿಬ್ಬಂದಿ ಸಭೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.