ಬಾದಾಮಿ: ‘ಚಾಲುಕ್ಯರ 4ನೇ ಜೈನ ಬಸದಿ ಎದುರಿನ ಬೆಟ್ಟದಲ್ಲಿ ಈಚೆಗೆ ಪತ್ತೆಯಾದ ಗಡಿಗೆಗಳನ್ನು ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂಶೋಧನೆಯನ್ನು ನಡೆಸಿದೆ ಎಂದು ಇಲಾಖೆಯ ಅಧೀಕ್ಷಕ ರಮೇಶ ಮೂಲಿಮನಿ ಪ್ರತಿಕ್ರಿಯಿಸಿದರು.
ಜೈನ ದೇವಾಲಯದ ಎದುರಿನ ಬೆಟ್ಟದಲ್ಲಿ ಉತ್ಖನನ ಕೈಗೊಂಡಾಗ ಕಲ್ಲಿನಲ್ಲಿ ಕೊರೆದ ಮೆಟ್ಟಿಲುಗಳು, ಮೂಳೆ ತುಂಬಿದ ಏಳು ಚಿಕ್ಕ ಮತ್ತು ದೊಡ್ಡ ಗಾತ್ರದ ಮಣ್ಣಿನ ಮಡಕೆಗಳು ಮತ್ತು 11 ತಾಮ್ರದ ನಾಣ್ಯಗಳು ದೊರಕಿದ್ದನ್ನು ಸ್ಮರಿಸಬಹುದು.
‘ಧಾರವಾಡ ವಲಯದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಸಾಯನಿಕ ವಿಭಾಗದ ಸಿಬ್ಬಂದಿ ಶೋಧನೆಯಲ್ಲಿ ತೊಡಗಿದ್ದಾರೆ. ಮೊದಲು ಪತ್ತೆಯಾದ ಮಣ್ಣಿನ ಮಡಕೆಯಲ್ಲಿದ್ದ ಮೂಳೆಗಳನ್ನು ರಾಸಾಯನಿಕ ದ್ರವ್ಯದ ಮೂಲಕ ಪರೀಕ್ಷಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಇನ್ನುಳಿದ ಮಡಕೆಗಳನ್ನು ಶೋಧಿಸಲಾಗುವುದು’ ಎಂದು ತಿಳಿಸಿದರು.
‘ತಾಮ್ರದ ನಾಣ್ಯಗಳ ಬಗ್ಗೆಯೂ ಶೋಧ ನಡೆಸಲಾಗುವುದು. ಮಡಕೆಯಲ್ಲಿದ್ದ ಮೂಳೆ ಯಾವ ಕಾಲದ್ದು ಇರಬಹುದು. ಪುರುಷ ಇಲ್ಲವೇ ಮಹಿಳೆಯದ್ದೋ ಎಂಬುದನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಶೋಧನೆಗೆ ಪುಣೆ ಡೆಕ್ಕನ್ ಕಾಲೇಜ್, ಭಾರತೀಯ ಪುರಾತತ್ವ ಇಲಾಖೆಯ ದೆಹಲಿ ಮತ್ತು ಕೇರಳ ಪ್ರಯೋಗಾಲಕ್ಕೆ ಕಳಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.