ADVERTISEMENT

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವ: ಸಹನಾಗೆ 17, ಭೀಮವ್ವಗೆ 16 ಚಿನ್ನದ ಪದಕ

ತೋಟಗಾರಿಕೆ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಸಾಧಕಿಯರಿಗೆ ಪ್ರದಾನ

ಬಸವರಾಜ ಹವಾಲ್ದಾರ
Published 10 ಜೂನ್ 2025, 18:40 IST
Last Updated 10 ಜೂನ್ 2025, 18:40 IST
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ 17 ಚಿನ್ನದ ಪದಕಗಳನ್ನು ಪಡೆದ ಸಹನಾ ಪಟಗೆ ಅವರೊಂದಿಗೆ ತಂದೆ–ತಾಯಿ
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ 17 ಚಿನ್ನದ ಪದಕಗಳನ್ನು ಪಡೆದ ಸಹನಾ ಪಟಗೆ ಅವರೊಂದಿಗೆ ತಂದೆ–ತಾಯಿ   

ಬಾಗಲಕೋಟೆ: ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವದಲ್ಲಿ ವಿಜಯನಗರ ಜಿಲ್ಲೆ ಹೂವಿನಹಡಗಲಿಯ ಹೊಳಲುವಿನ ಸಹನಾ ಪಟಗೆ 17 ಚಿನ್ನದ ಪದಕ ಗಳಿಸಿದರೆ, ಕೊಪ್ಪಳ ಜಿಲ್ಲೆಯ ತಳಕಲ್‌ನ ಭೀಮವ್ವ 16 ಚಿನ್ನದ ಪದಕ ಗಳಿಸಿದರು. ಆಪ್ತರೊಂದಿಗೆ ಇಬ್ಬರೂ ಸಾಧಕಿಯರು ಸಂಭ್ರಮಿಸಿದರು.

‘ವಿಜ್ಞಾನಿಯಾಗಿ ಕೃಷಿಕರ ಜೀವನ ಸುಧಾರಿಸಲು ಮತ್ತು ಆರ್ಥಿಕ ಮಟ್ಟ ವೃದ್ಧಿಸಲು ಪ್ರಯತ್ನಿಸುವೆ. ತೋಟಗಾರಿಕೆ ಕ್ಷೇತ್ರದಲ್ಲೇ ಪ್ರಗತಿ ಸಾಧಿಸುವೆ. ಬೀದರ್ ತೋಟಗಾರಿಕೆ ಕಾಲೇಜಿನಲ್ಲಿ ಸ್ನಾತಕ ಪದವಿ ಪಡೆದಿದ್ದು, ಶ್ರಮಕ್ಕಿಂತ ಹೆಚ್ಚಿನ ಫಲಿತಾಂಶ ಬಂದಿದೆ. ಓದಿಗೆ ಪ್ರೋತ್ಸಾಹ ನೀಡುವಲ್ಲಿ ತಂದೆ–ತಾಯಿ ಪರಿಶ್ರಮ ಹೆಚ್ಚಿದ್ದು, ಪದಕಗಳನ್ನು ಅವರಿಗೇ ಅರ್ಪಿಸುವೆ’ ಎಂದು ವಿದ್ಯಾರ್ಥಿನಿ ಸಹನಾ ಪಟಗೆ ಹೇಳಿದರು.

‘ಟೇಲರಿಂಗ್‌ನಲ್ಲಿ ಬಂದ ದುಡಿಮೆಯನ್ನೆಲ್ಲ ಮೂವರು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಿರುವೆ. ದುಶ್ಚಟಗಳನ್ನು ಬಿಟ್ಟು ಮಕ್ಕಳ ಶಿಕ್ಷಣಕ್ಕೆ ಪೋಷಕರು ಆದ್ಯತೆ ನೀಡಬೇಕು. ಅವರು ಜ್ಞಾನ ಪಡೆದರೆ, ಬದುಕು ಸುಂದರವಾಗುತ್ತದೆ’ ಎಂದು ಸಹನಾ ತಂದೆ ಮಂಜುನಾಥ ಪಟಗೆ ಹೇಳಿದರು.

ADVERTISEMENT

ನನಸಾದ ಕನಸು: ‘ಅಪ್ಪ ಇಲ್ಲ. ಆದರೆ, ತಾಯಿ ಮತ್ತು ಅಣ್ಣ ಪ್ರೋತ್ಸಾಹದಿಂದ ಓದಿದೆ. ನನ್ನ ಓದಿಗೆ ಕೊರತೆ ಆಗದಂತೆ ನೋಡಿಕೊಂಡರು. ಅವರ ಮತ್ತು ನನ್ನ ಕನಸು ಇಂದು ನನಸಾಗಿದೆ’ ಎಂದು ಭೀಮವ್ವ ಹೇಳಿದರು.

‘ಅಣ್ಣ ಪದವಿಯಲ್ಲಿ ಒಂದು ಚಿನ್ನದ ಪದಕ ಪಡೆದಿದ್ದ. ನಾನೂ ಒಂದು ಚಿನ್ನದ ಪದಕ ಪಡೆಯುವ ಗುರಿ ಹೊಂದಿದ್ದೆ. ನಮ್ಮ ಮನೆಯಲ್ಲಿ ಯಾರೂ ಚೆನ್ನಾಗಿ ಓದಿಲ್ಲ. ಆದರೆ, ನನ್ನ ಓದಿಗಾಗಿ ಅಣ್ಣ ಪ್ರಕಾಶ ಮತ್ತು ತಾಯಿ ಎಲ್ಲವನ್ನೂ ತ್ಯಾಗ ಮಾಡಿದರು. ಅವರ ಮಾತುಗಳೇ ನನಗೆ ಸ್ಫೂರ್ತಿಯಾದವು’ ಎಂದರು.

ಸ್ನಾತಕೋತ್ತರ ಪದವಿಯಲ್ಲಿ ನಾಲ್ಕು ಚಿನ್ನದ ಪದಕ ಪಡೆದಿರುವ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಈರಳೆ ವಳಮುಡಿಯ ಧನ್ಯಶ್ರೀ ಎಸ್‌.ಜಿ, ‘ಕಾಫಿ ತೋಟದಲ್ಲಿ ಆಡಿಕೊಂಡಿದ್ದೆ. ತೋಟಗಾರಿಕೆಯಲ್ಲಿ ಚಿನ್ನದ ಪದಕಗಳನ್ನು ಪಡೆದಿರುವೆ. ತುಂಬಾ ಖುಷಿಯಾಗಿದೆ’ ಎಂದು ಸಂತಸ ಹಂಚಿಕೊಂಡರು.

ಮಾಜಿ ಸೈನಿಕನ ಪುತ್ರಿ ಸಂಭ್ರಮ: ಚಿಕ್ಕಮಗಳೂರು ಜಿಲ್ಲೆಯ ಹೆಚ್ಚೆ ಗ್ರಾಮದ ಮಾಜಿ ಸೈನಿಕ ತಿಮ್ಮಪ್ಪ ಅವರ ಪುತ್ರಿ ಅಮೂಲ್ಯಾ ಎಚ್‌.ಟಿ. ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ‘ಸೈನಿಕನಾಗಿದ್ದ ಅಪ್ಪನ ಶಿಸ್ತಿನಿಂದಲೇ ಇಂದು ನಾನು ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಅಗ್ನಿಶಾಮಕ ಇಲಾಖೆಯಲ್ಲಿದ್ದ ಅಜ್ಜ ರಾಷ್ಟ್ರಪತಿ ಪದಕ ಪಡೆದಿದ್ದರು. ನಾನು ವಿಶ್ವವಿದ್ಯಾಲಯದ ಪದಕ ಪ‍ಡೆದಿದ್ದೇನೆ’ ಎಂದು ಸಂಭ್ರಮಿಸಿದರು.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಘಟಿಕೋತ್ಸವದಲ್ಲಿ 16 ಚಿನ್ನದ ಪದಕ ಪಡೆದ ಭೀಮವ್ವ ಅವರೊಂದಿಗೆ ಕುಟುಂಬ ಸದಸ್ಯರು

ವಿದ್ಯಾನಿಯರದ್ದೇ ಮೇಲುಗೈ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪಿಎಚ್‌.ಡಿ ಸ್ನಾತಕೋತ್ತರ ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದ 35 ಜನರಲ್ಲಿ 28 ಮಂದಿ ವಿದ್ಯಾರ್ಥಿನಿಯರೇ ಇದ್ದಾರೆ.  ಸ್ನಾತಕ ಪದವಿ ವಿಭಾಗದ 17 ಜನರಲ್ಲಿ 14 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಸ್ನಾತಕೋತ್ತರ ಪದವಿ ವಿಭಾಗದ 15 ಜನರಲ್ಲಿ 12 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಪಿಎಚ್‌.ಡಿಯಲ್ಲಿ ಚಿನ್ನದ ಪದಕ ಪಡೆದು ಮೂವರಲ್ಲಿ ಇಬ್ಬರು ವಿದ್ಯಾರ್ಥಿನಿಯರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.