ADVERTISEMENT

ಬಾಗಲಕೋಟೆ | ಪರಿಹಾರಕ್ಕೆ ಅರ್ಜಿ: ಜೂನ್ 15 ಕೊನೆಯ ದಿನ

ಲಾಕ್‌ಡೌನ್: ಹಣ್ಣು–ತರಕಾರಿ ಬೆಳೆ ನಷ್ಟ: ರೈತರ ನೆರವಿಗೆ ಮುಂದಾದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 17:22 IST
Last Updated 10 ಜೂನ್ 2020, 17:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಕೋವಿಡ್–19 ಲಾಕ್‌ಡೌನ್ ಕಾರಣ ಹಣ್ಣು–ತರಕಾರಿ ಬೆಳೆದು ಅದು ಮಾರಾಟವಾಗದೇ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಹೆಕ್ಟೇರ್‌ಗೆ ಗರಿಷ್ಠ ₹15 ಸಾವಿರ, ಕನಿಷ್ಟ ₹2 ಸಾವಿರ ಪರಿಹಾರ ನೀಡಲು ನಿರ್ಧರಿಸಿದೆ.

ಬೆಳೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಬಾಳೆ, ಪಪ್ಪಾಯಿ, ಅಂಜೂರ, ಕರಬೂಜ, ಕಲ್ಲಂಗಡಿ ಹಾಗೂ ತರಕಾರಿ ಬೆಳೆಗಳಾದ ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಕುಂಬಳ, ಬೂದುಕುಂಬಳ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ ಬೆಳೆಗಾರರಿಗೆ ಮಾತ್ರ ನಷ್ಟ ಪರಿಹಾರ ಸಿಗಲಿದೆ.

ಫಲಾನುಭವಿಗಳಿಗೆ 2019–20ನೇ ಸಾಲಿನ ಅಲ್ಪಾವಧಿ ಹಣ್ಣು ಹಾಗೂ ತರಕಾರಿ ಬೆಳೆಗಳಿಗೆ ಹಿಂಗಾರು ಬೆಳೆ ಸಮೀಕ್ಷೆ ಆಧಾರವಾಗಿಟ್ಟುಕೊಂಡು ಮತ್ತು ಬಹುವಾರ್ಷಿಕ ಬೆಳೆಗಳಿಗೆ 2019–20ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಆಧಾರವಾಗಿಸಿಕೊಂಡು ಪರಿಹಾರ ವಿತರಿಸಲಾಗುತ್ತಿದೆ.

ADVERTISEMENT

ಬೇಸಿಗೆ ಬೆಳೆಗಳಾಗಿರುವ ಕಲ್ಲಂಗಡಿ, ಕರಬೂಜ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿಲ್ಲದಿದ್ದಲ್ಲಿ, ಈರುಳ್ಳಿ ಹಾಗೂ ಬಾಳೆ ಬೆಳೆದ ರೈತರು 2020ನೇ ಮಾರ್ಚ್ ಎರಡನೇ ವಾರದ ನಂತರ ಕಟಾವಿಗೆ ಬಂದು ಮಾರಾಟವಾಗದೇ ನಷ್ಟ ಅನುಭವಿಸಿದ್ದರೆ ಅಂತಹವರು ಅಗತ್ಯ ದಾಖಲಾತಿಗಳಾದ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ ಪುಸ್ತಕದ ನಕಲು ಪ್ರತಿ ಹಾಗೂ ಸ್ವಯಂ ದೃಢೀಕರಣ ಪತ್ರದೊಂದಿಗೆ ಜೂನ್ 15ರೊಳಗೆ ಹಿರಿಯ ತೋಟಗಾರಿಕೆ ನಿರ್ದೇಶಕರು ಸುಭಾಷ್ ಸುಲ್ಫಿ ಅವರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಬಾಗಲಕೋಟೆ, ಕಲಾದಗಿ ಹಾಗೂ ರಾಂಪುರ (ಮೊಬೈಲ್ ಸಂಖ್ಯೆ: 98457–29261, 99869–29882, 82172–95183) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.