ಬಾಗಲಕೋಟೆ: ಜಿಲ್ಲೆಯ ಅಲ್ಲಲ್ಲಿ ಮೆಕ್ಕೆಜೋಳ ಬೆಳೆಯಲ್ಲಿ ಲದ್ದಿ ಹುಳುವಿನ (ಕಂಬಳಿ ಹುಳ) ಬಾಧೆ ಕಂಡುಬಂದಿದ್ದು, ಲದ್ದಿ ಹುಳು ನಿರ್ವಹಣೆಗೆ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿತ್ತನೆ ಮಾಡಿದ 15 ದಿನಗಳ ನಂತರ ಹೊಲದಲ್ಲಿ ಎಕರೆಗೆ 12ರಂತೆ ಮೋಹಕ ಬಲೆಗಳನ್ನು ಹಾಕಿ ಒಂದು ಬಲೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಗಂಡು ಪತಂಗಗಳು ಬಿದ್ದಲ್ಲಿ, ಸಿಂಪರಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೊದಲನೇ ಸಿಂಪರಣೆಯಾಗಿ ಬೇವಿನ ಕಷಾಯ (ಪ್ರತಿ ಲೀಟರ್ ನೀರಿಗೆ, 5 ಮಿಲಿ ಲೀಟರ್) ಸಿಂಪರಣೆ ಮಾಡುವುದರಿಂದ ಪತಂಗವು ಮೊಟ್ಟೆ ಇಡುವ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ ಎಂದಿದ್ದಾರೆ.
ಹೆಣ್ಣು ಪತಂಗವು ಎಲೆಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ತತ್ತಿಯನ್ನಿಟ್ಟು ಅದನ್ನು ಹತ್ತಿಯಾಕಾರದ ವಸ್ತುವಿನಿಂದ ಮುಚ್ಚಿರುತ್ತದೆ. ಇಂತಹ ಎಲೆಗಳನ್ನು ಆರಿಸಿ ಕಿತ್ತು ತೆಗೆದು ಹಾಕುವುದರಿಂದ ಸಾವಿರಾರು ಮರಿಗಳನ್ನು ನಾಶಪಡಿಸಿದಂತಾಗುತ್ತದೆ. ಮರಿಹುಳುಗಳು ಒಂದು ಅಥವಾ ಎರಡನೇ ಹಂತದಲ್ಲಿ ಇರುವಾಗ ಕ್ಲೋರ್ಯಾಂಟ್ರಿನಿಲಿಪ್ರೋಲ್ ಅಥವಾ ಎಮಾಮೆಕ್ಟಿನ್ ಬೆಂಜೋಯೇಟ್ 0.2-0.3 ಗ್ರಾಂ ಅಥವಾ ಸ್ಪೈನೋಟೋರಾಮ್ 0.2 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.