ಬಾಗಲಕೋಟೆ: ನಗರದ ನಿವೃತ್ತ ನೌಕರರೊಬ್ಬರಿಗೆ ರಿಯಾಯಿತಿ ದರದಲ್ಲಿ ಷೇರು ನೀಡುವುದಾಗಿ ನಂಬಿಸಿ 37 ದಿನಗಳಲ್ಲಿ ₹85.25 ಲಕ್ಷ ವಂಚನೆ ಮಾಡಿದ್ದಾರೆ.
ಬಿ.ಎನ್. ರಾಠಿ ಸೆಕ್ಯೂರಿಟೀಸ್ ಹೆಸರಿನಲ್ಲಿ ನಕಲಿ ಮೊಬೈಲ್ ಆ್ಯಪ್ ಮೂಲಕ ನಿವೃತ್ತ ನೌಕರರಿಗೆ ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಅನ್ನು ಡೌನ್ಲೋಡ್ ಮಾಡಿಸಿ ರಿಯಾಯಿತಿ ದರದಲ್ಲಿ ಪ್ರತಿಷ್ಠಿತ ಕಂಪನಿಗಳ ಷೇರು ನೀಡುವುದಾಗಿ ನಂಬಿಸಿದ್ದಾರೆ.
ನಿವೃತ್ತ ನೌಕರರು ಹಣ ಇಲ್ಲ ಎಂದಾಗ, ಇನ್ಸ್ಟಂಟ್ ಲೋನ್ ನೀಡುವುದಾಗಿ ನಂಬಿಸಿ, ಮೊಬೈಲ್ ಆ್ಯಪ್ ಮೂಲಕ ಇವರ ಖಾತೆಗೆ ಹಣ ಜಮಾ ಮಾಡಿದಂತೆ ಮಾಡಿದ್ದಾರೆ.
ನಂತರದಲ್ಲಿ ಲೋನ್ ಹಣ ಪಾವತಿಸುವಂತೆ ಹಾಗೂ ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಪ್ರೇರೇಪಿಸಿ ಅವರ ಖಾತೆಯಿಂದ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಕೋಟ್ಯಂತರ ರೂಪಾಯಿ ಲಾಭ ಬಂದಿದೆ ಎಂದು ಆ್ಯಪ್ನಲ್ಲಿ ತೋರಿಸುತ್ತಾ ಬಂದಿದ್ದಾರೆ. ಜತೆಗೆ ವಿದೇಶಿ ಪ್ರವಾಸಕ್ಕೂ ಹೋಗಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಸಾಲದ ಕೊನೆಯ ಕಂತು ಪಾವತಿಸುತ್ತಿದ್ದಂತೆ, ಆ್ಯಪ್ನಲ್ಲಿದ್ದ ಎಲ್ಲ ಹಣವನ್ನು ಡ್ರಾ ಮಾಡಿಕೊಂಡಿದ್ದಾರೆ. ಮೋಸ ಹೋಗಿರುವುದು ಗೊತ್ತಾದ ಮೇಲೆ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.