ಬಾಗಲಕೋಟೆ : ಕೋವಿಡ್ ಮೂರನೇ ಅಲೆ ಹಿನ್ನೆಲೆಯಲ್ಲಿ ವಾರಾಂತ್ಯದಲ್ಲಿ ಕರ್ಫ್ಯೂ ವಿಧಿಸಿದ್ದರೂ ಅದನ್ನು ನಿರ್ಲಕ್ಷಿಸಿ ಬಾದಾಮಿ ಬಳಿಯ ಬನಶಂಕರಿ ದೇವಿ ಜಾತ್ರೆಗೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಮಂದಿ ಪಾದಯಾತ್ರೆ ಹೊರಟಿದ್ದಾರೆ.
ಜನವರಿ 17ರಂದು ಹುಣ್ಣಿಮೆಯ ದಿನ ಬನಶಂಕರಿಯಲ್ಲಿ ರಥೋತ್ಸವ ನಿಗದಿಯಾಗಿದೆ. ಜಿಲ್ಲಾಡಳಿತ ಜಾತ್ರೆಗೆ ನಿಷೇಧ ವಿಧಿಸಿದ್ದು, ಸರಳವಾಗಿ ಧಾರ್ಮಿಕ ಆಚರಣೆಗೆ ಮಾತ್ರ ಅವಕಾಶ ನೀಡಲಾಗಿದೆ.
ಜಾತ್ರೆಗೆ ಜನರು ಬರದಂತೆ ತಡೆಯಲು ಬಾದಾಮಿ-ಬನಶಂಕರಿ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೂ ಪಾದಯಾತ್ರೆ ಮೂಲಕ ಭಕ್ತರು ಬನಶಂಕರಿ ಪರಿಸರಕ್ಕೆ ಬರುತ್ತಿದ್ದಾರೆ. ಇವರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದಾರೆ.
ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಪಾದಯಾತ್ರೆ ಮಾಡುತ್ತಿರುವುದು ಕಂಡುಬಂದಿತು.
ಇಳಕಲ್, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಮುಧೋಳ ಭಾಗದಿಂದ ಬಂದಿರುವವರು ಹೆಚ್ಚಿನ ಸಂಖ್ಯೆಯಲ್ಲಿ ನಡಿಗೆಯಲ್ಲಿ ಕಾಣಸಿಕ್ಕರು.
ಇಳಕಲ್ ಕಡೆಯಿಂದ ಹೊರಟವರಲ್ಲಿ ಪಕ್ಕದ ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಬಂದ ಭಕ್ತರು ಸೇರಿದ್ದಾರೆ. ಅವರು ಹೂಲಗೇರಿ, ಬಂಡರಗಲ್, ಕಾಟಾಪೂರ, ದಮ್ಮೂರು, ಗುಡೂರು, ಪಟ್ಟದಕಲ್, ಶಿವಯೋಗ ಮಂದಿರದ ಮೂಲಕ ಬನಶಂಕರಿ ತಲುಪಲಿದ್ದಾರೆ.
ಮಾರ್ಗ ಮಧ್ಯೆ ಅಲ್ಲಲ್ಲಿ ಬನಶಂಕರಿ ದೇವಿಯ ಭಕ್ತರು ಪಾದಯಾತ್ರಿಗಳಿಗೆ ಉಚಿತ ಪ್ರಸಾದ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಮಾಡಿದ್ದಾರೆ.
ಪ್ರತಿ ವರ್ಷ ಬನದ ಹುಣ್ಣಿಮೆ ರಥೋತ್ಸವದ ಮರುದಿನದಂದ ಒಂದು ತಿಂಗಳು ಕಾಲ ಬನಶಂಕರಿ ಪರಿಸರದಲ್ಲಿ ಜಾತ್ರೆ ರಂಗು ಪಡೆಯುತ್ತಿತ್ತು. ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣ ಜಾತ್ರೆಗೆ ಅನುಮತಿ ದೊರೆತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.