ADVERTISEMENT

ಬಾಗಲಕೋಟೆ: ಬ್ಯಾಂಕ್‌ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 8:23 IST
Last Updated 28 ಜನವರಿ 2026, 8:23 IST
ವಾರಕ್ಕೆ ಐದೇ ದಿನ ಬ್ಯಾಂಕ್ ಕೆಲಸ ಜಾರಿಗೊಳಿಸಬೇಕು ಎಂದು ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್‌ ನೌಕರರು ಪ್ರತಿಭಟನೆ ಮಾಡಿದರು
ವಾರಕ್ಕೆ ಐದೇ ದಿನ ಬ್ಯಾಂಕ್ ಕೆಲಸ ಜಾರಿಗೊಳಿಸಬೇಕು ಎಂದು ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್‌ ನೌಕರರು ಪ್ರತಿಭಟನೆ ಮಾಡಿದರು   

ಬಾಗಲಕೋಟೆ: ಬ್ಯಾಂಕಿಂಗ್‌ ವಹಿವಾಟನ್ನು ವಾರದಲ್ಲಿ ಐದು ದಿನಗಳಿಗೆ ಇಳಿಸಬೇಕು ಎಂದು ಆಗ್ರಹಿಸಿ ಮಂಗಳವಾರ ನವನಗರದ ಎಂಜಿನಿಯರಿಂಗ್‌ ಕಾಲೇಜು ವೃತ್ತದ ಬಳಿ ಬ್ಯಾಂಕ್‌ ಕಾರ್ಮಿಕ ಸಂಘಗಳ ಸಂಯುಕ್ತ ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ನೌಕರರು, ಬ್ಯಾಂಕಿಂಗ್ ವಲಯದಲ್ಲಿ ವಾರಕ್ಕೆ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿಗೆ ತರುವಂತೆ ಬ್ಯಾಂಕ್‌ ನೌಕರರ ಈ ಹಿಂದಿನ ಬೇಡಿಕೆಯನ್ನು ಕೇಂದ್ರ ಸರ್ಕಾರ ಈವರೆಗೂ ಜಾರಿಗೆ ತಂದಿಲ್ಲ. ದ್ವಿಪಕ್ಷೀಯ ಒಪ್ಪಂದದಂತೆ ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರವನ್ನು ರಜೆ ಎಂದು ಘೋಷಿಸಲಾಗಿದೆ. ಉಳಿದ ಶನಿವಾರಗಳನ್ನು ಅರ್ಧ ದಿನದ ಬದಲು ಪೂರ್ಣ ಕೆಲಸದ ದಿನಗಳಾಗಿ ಮಾಡಲಾಗಿದೆ. ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸುವ ಬೇಡಿಕೆಯನ್ನು ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು ಎಂದು ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ದೂರಿದರು.

ರಿಸರ್ವ್ ಬ್ಯಾಂಕ್, ಎಲ್ಐಸಿ, ಕೇಂದ್ರ ಸರ್ಕಾರದ ಕಚೇರಿಗಳು, ವಿದೇಶಿ ವಿನಿಮಯ, ಷೇರು ಮಾರುಕಟ್ಟೆ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ವಾರದಲ್ಲಿ ಐದು ದಿನದ ಕೆಲಸದ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತ್ರ ಅನುಷ್ಠಾನಗೊಂಡಿಲ್ಲ ಎಂದರು.

ADVERTISEMENT

‘ಭಾರತೀಯ ಬ್ಯಾಂಕ್‌ಗಳ ಸಂಘ ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ನಡುವೆ ಸಹಿ ಮಾಡಲಾದ ಒಪ್ಪಂದ ಪತ್ರ ಹಾಗೂ ಹೊರಡಿಸಲಾದ ಜಂಟಿ ಟಿಪ್ಪಣಿಯಂತೆ ಎಲ್ಲ ಶನಿವಾರಗಳನ್ನು ಬ್ಯಾಂಕ್ ರಜಾ ದಿನಗಳಾಗಿ ಘೋಷಿಸುವಂತೆ ಶಿಫಾರಸು ಮಾಡಲಾಗಿದೆ. ಅದರಂತೆ ಜಾರಿ ಮಾಡಬೇಕು’ ಎಂದು ಆಗ್ರಹಿಸಿದರು.

ಮೂರು ದಿನಗಳಿಂದ ರಜೆ ಇದ್ದ ಬ್ಯಾಂಕ್‌ಗಳು ಇಂದೂ ಸಹ ಮುಚ್ಚಿದ್ದರಿಂದ ಗ್ರಾಹಕರು ಪರದಾಡಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.