ADVERTISEMENT

ಬಾಗಲಕೋಟೆ ಬಿವಿವಿಎಸ್ ಕಾಲೇಜುಗಳ ಅಮೃತ ಸಂಭ್ರಮ

ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯಗಳ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 6:43 IST
Last Updated 23 ನವೆಂಬರ್ 2022, 6:43 IST
ಬಾಗಲಕೋಟೆಯಲ್ಲಿರುವ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕಟ್ಟಡ
ಬಾಗಲಕೋಟೆಯಲ್ಲಿರುವ ಬಸವೇಶ್ವರ ಕಲಾ ಮಹಾವಿದ್ಯಾಲಯದ ಕಟ್ಟಡ   

ಬಾಗಲಕೋಟೆ: ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಅಮೃತ ಮಹೋತ್ಸವ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ನ.25, 26 ರಂದು ಸಂಘದ ಮೈದಾನ (ಹಳೆಯ ಆವರಣ)ದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಬಾಹ್ಯಾಕಾಶ ವಿಜ್ಞಾನಿ ಡಾ.ಕೆ. ಕಸ್ತೂರಿರಂಗನ್ ಉದ್ಘಾಟಿಸಲಿದ್ದಾರೆ. ನಿಡಸೋಸಿಯ ಪಂಚಮಲಿಂಗೇಶ್ವರ ಸ್ವಾಮೀಜಿ, ಚರಂತಿಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಸಂಸದ ಪಿ.ಸಿ. ಗದ್ದಿಗೌಡರ, ಬಸವರಾಜ ಪಾಟೀಲ ಸೇಡಂ, ಕೇಂದ್ರೀಯ ಆದಿವಾಸಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ತೇಜಸ್ವಿ ಕಟ್ಟಿಮನಿ ಭಾಗವಹಿಸಲಿದ್ದು, ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ.

ADVERTISEMENT

ಕಲಾ ದೀಪ್ತಿ, ವಿಜ್ಞಾನ ದೀಪ್ತಿ, ಸುವರ್ಣ ವಾಣಿಜ್ಯ ಚಂದನ ಹಾಗೂ ಬಾಗಲಕೋಟೆ ತಾಲ್ಲೂಕು ಗ್ರಾಮಗಳ ಅಧ್ಯಯನ ಸಂಪುಟಗಳ ಬಿಡುಗಡೆ ಮಾಡಲಾಗುವುದು ಎಂದರು.

ಮಧ್ಯಾಹ್ನ 2.30ಕ್ಕೆ ಶೈಕ್ಷಣಿಕ ಸಂಸ್ಥೆಗಳ ಅಮೃತ ಮಹೋತ್ಸವ ಸ್ಮರಣೆ ಕುರಿತ ಗೋಷ್ಠಿಗೆ ಮುಖ್ಯ ಅತಿಥಿಯಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಡೋಣೂರ ಭಾಗವಹಿಸಲಿದ್ದು, ಪ್ರೊ.ಎನ್‌.ಜಿ. ಕರೂರ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ವಿ.ವಿ. ಸಂಘ, ಕೆಎಲ್‌ಇ ಸಂಸ್ಥೆ, ಬಿ.ಎಲ್‌.ಡಿ.ಇ ಸಂಸ್ಥೆ, ವೀರಶೈವ ವಿದ್ಯಾವರ್ಧಕ ಸಂಘದ ಕುರಿತು ಉಪನ್ಯಾಸ ನಡೆಯಲಿದೆ ಎಂದು ಹೇಳಿದರು.

ಸಂಜೆ 5.30ಕ್ಕೆ ಸಿದ್ಧರಾಮಯ್ಯ ಮಠಪತಿ ಅವರಿಂದ ಹಿಂದೂಸ್ತಾನಿ ಸಂಗೀತ, ರಾತ್ರಿ 7.30 ರಿಂದ ಕೊಲ್ಲಾಪುರದ ಜಾಗೋ ಹಿಂದೂಸ್ತಾನಿ ತಂಡದಿಂದ ದೇಶಭಕ್ತಿ ಗೀತೆಗಳ ಕಾರ್ಯಕ್ರಮವಿರಲಿದೆ.

ನ.26 ರಂದು ಬೆಳಿಗ್ಗೆ 0.30ಕ್ಕೆ ಕಾಲೇಜುಗಳು ನಡೆದು ಬಂದ ದಾರಿ ಗೋಷ್ಠಿ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕವಿವಿ ಕುಲಪತಿ ಕೆ.ಬಿ. ಗುಡಸಿ ಭಾಗವಹಿಸಲಿದ್ದಾರೆ. 11.30ಕ್ಕೆ ಹಳೆಯ ವಿದ್ಯಾರ್ಥಿಗಳ ಸಮಾವೇಶ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಇಳಕಲ್‌ ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೇಜಸ್ವಿ ಕಟ್ಟಿಮನಿ, ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಭಾಗವಹಿಸಲಿದ್ದಾರೆ.ಹಳೆಯ ವಿದ್ಯಾರ್ಥಿಗಳು, ‍ಪೋಷಕರು ಭಾಗವಹಿಸಬೇಕು ಎಂದು ಹೇಳಿದರು.

ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಅಶೋಕ ಸಜ್ಜನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.