ADVERTISEMENT

ಕಾಂಗ್ರೆಸ್‌ನಲ್ಲಿರುವವರೆಲ್ಲ ಹುಚ್ಚರು: ಯತ್ನಾಳ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:02 IST
Last Updated 2 ಸೆಪ್ಟೆಂಬರ್ 2018, 19:02 IST

ಬಾಗಲಕೋಟೆ: ’12 ಮಕ್ಕಳನ್ನು ಹೆತ್ತವರು ಸಬ್ಸಿಡಿ ತಗೋತಾರೆ. ಎರಡು ಮಕ್ಕಳನ್ನು ಹೆತ್ತವರು ತೆರಿಗೆ ಕಟ್ಟುತ್ತಾರೆ. ನಮ್ಮ ದೇಶದ ಹಣೇಬರಹವೇ ಹಿಂಗಾಗೈತಿ, ಇದಕ್ಕೆ ಕಾರಣ ಯಾರೂಂತ ಗೊತ್ತೇನು’ ಎಂದು ಭಾನುವಾರ ಇಲ್ಲಿ ಪ್ರಶ್ನಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು.

ವಿಧಾನಪರಿಷತ್ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,‘ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಒಬ್ಬ ಹುಚ್ಚ, ಆ ಪಕ್ಷದಲ್ಲಿರುವವರು ಹುಚ್ಚರೇ. ಅಂಥವರನ್ನು ಪ್ರಧಾನಿ ಮಾಡಲು ಸಾಧ್ಯವೇ? ಗಾಂಧಿ ಎಂದು ಹೆಸರು ಇಟ್ಟುಕೊಂಡ, ನಕಲಿ ಗಾಂಧಿಗಳನ್ನು ಪ್ರಧಾನಿ ಮಾಡಲಾಗುವುದಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ದೇಶವನ್ನು ಲೂಟಿ ಮಾಡಿದ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಲು ಸಾಧ್ಯವೇ’ ಎಂದು ಕೇಳಿದರು.

‘ಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಬೀಳುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿನ ಶಾಸಕರು ರಾಜೀನಾಮೆ ನೀಡುತ್ತಾರೆ. ನಂತರ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ’ ಎಂದರು.

ADVERTISEMENT

**

‘ಪಕ್ಷಕ್ಕೆ ಬರುವ ವಿಚಾರ ಗೊತ್ತಿಲ್ಲ’

ಸಚಿವ ರಮೇಶ ಜಾರಕಿಹೊಳಿ 12 ಮಂದಿ ಶಾಸಕರೊಂದಿಗೆ ಬಿಜೆಪಿ ಸೇರುವ ವಿಚಾರ ನನಗೆ ಗೊತ್ತಿಲ್ಲ. ನಿಮ್ಮಿಂದಲೇ ಈ ವಿಚಾರ ತಿಳಿದಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ನೇತೃತ್ವದ ತಂಡ ಪಕ್ಷಕ್ಕೆ ಬಂದರೆ ಅವರನ್ನು ಸ್ವಾಗತಿಸುವ ಬಗ್ಗೆ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.