ADVERTISEMENT

ಕಹಿಸತ್ಯ ಹೇಳದ ದಲಿತ ಲೇಖಕರು; ಘಂಟಿ ವಿಷಾದ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 2:48 IST
Last Updated 16 ಸೆಪ್ಟೆಂಬರ್ 2025, 2:48 IST
ಬಾಗಲಕೋಟೆ ಚರಂತಿಮಠದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಕೃತಿಗಳನ್ನು ಸಾಹಿತಿ ಮಲ್ಲಿಕಾ ಘಂಟಿ ಬಿಡುಗಡೆ ಮಾಡಿದರು
ಬಾಗಲಕೋಟೆ ಚರಂತಿಮಠದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ಕೃತಿಗಳನ್ನು ಸಾಹಿತಿ ಮಲ್ಲಿಕಾ ಘಂಟಿ ಬಿಡುಗಡೆ ಮಾಡಿದರು   

ಬಾಗಲಕೋಟೆ: ‘ಮರಾಠಿ ಲೇಖಕರು ತಮ್ಮ ಆತ್ಮಕಥೆಗಳಲ್ಲಿ ನಿರ್ಭಿಡೆಯಿಂದ ಹಾಗೂ ವಾಸ್ತವ ಕಹಿಸತ್ಯಗಳನ್ನು ಹೇಳಿದ ಹಾಗೆ ಕನ್ನಡದ ದಲಿತ ಲೇಖಕರಿಗೆ ಸಾಧ್ಯವಾಗಿಲ್ಲ’ ಎಂದು ಸಾಹಿತಿ ಮಲ್ಲಿಕಾ ಘಂಟಿ ವಿಷಾದ ವ್ಯಕ್ತಪಡಿಸಿದರು.

ಚರಂತಿಮಠದಲ್ಲಿ ಶಿವಾನುಭವ ಸಮಿತಿ, ಗೆಳೆಯರ ಬಳಗ ಹಾಗೂ ಮೈಸೂರಿನ ಕವಿತಾ ಪ್ರಕಾಶನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ವಿಜಯಪುರ ಹೆಚ್ಚುವರಿ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರ ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ಹಾಗೂ ಅವರ ಆತ್ಮಕಥೆ ‘ದೇವರಗೆಣ್ಣೂರ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮಹಾರಾಷ್ಟ್ರದಲ್ಲಾದ ಔದ್ಯೋಗೀಕರಣ ಪ್ರಭಾವ ಹಾಗೂ ಅಂಬೇಡ್ಕರ್ ಅವರ ಪ್ರಭಾವದಿಂದ ಮರಾಠಿ ಲೇಖಕರು ವಿಶ್ಲೇಷಣೆಗೆ ಒಳಪಡಿಸುವ ಹಾಗೆ ಬರೆದರು. ಆದರೆ, ಕರ್ನಾಟಕದ ಲೇಖಕರಿಗೆ ಅವಮಾನ, ತಲ್ಲಣ ಹಾಗೂ ನೋವುಗಳನ್ನು ಹೇಳಿಕೊಳ್ಳುವ ಒತ್ತಡಗಳು ಬಂದಿಲ್ಲ’ ಎಂದರು.

ADVERTISEMENT

ಲೇಖಕ ಸೋಮಲಿಂಗ ಗೆಣ್ಣೂರ ಅವರು ತಮ್ಮ ಊರ ಹೆಸರಿನ ಮೂಲಕ ತಮ್ಮ ಬದುಕನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಗಾಂಧಿವಾದ, ಬಸವಣ್ಣನ ಸಿದ್ಧಾಂತ ಕಾರಣಗಳಿಗಾಗಿ ಅವರೊಳಗೆ ಸಾತ್ವಿಕತೆ ಮನೆ ಮಾಡಿಕೊಂಡಿದೆ ಎಂದರು.

ಲೇಖಕ ಪ್ರಕಾಶ ಖಾಡೆ ಪುಸ್ತಕ ಪರಿಚಯಿಸಿ, ‘ದೇವರಗೆಣ್ಣೂರು ಕೃತಿಯು ಕನ್ನಡದ ಗ್ರಾಮ್ಯ ಅಸ್ಮಿತೆ ಕಟ್ಟಿಕೊಟ್ಟಿದೆ. ದಲಿತ ಬಾಲಕರ ಬಾಲ್ಯಲೋಕವು ಎಷ್ಟೊಂದು ಅವಮಾನವೀಯ ನೆಲೆಯಲ್ಲಿ ರೂಪುಗೊಂಡಿರುತ್ತದೆಯೋ, ಅದನ್ನು ಸವಾಲಾಗಿ ಸ್ವೀಕರಿಸಿ ಬೆಳೆದು ದೊಡ್ಡವರಾಗುವ ಛಲಗಾರಿಕೆ ಲೇಖಕರ ಅನುಭವಗಳಲ್ಲಿ ಕಾಣಬಹುದಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಸಂಗಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಚರಂತಿಮಠದ ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ ಅಧ್ಯಕ್ಷತೆ ವಹಿಸಿದ್ದರು. ಯುಐಐಸಿ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ಎಂ.ಎಸ್. ಚಲವಾದಿ ಇದ್ದರು. ಸತ್ಯಶೋಧಕ ಸಂಘದ ರಾಜ್ಯ ಅಧ್ಯಕ್ಷ ಪರಶುರಾಮ ಮಹಾರಾಜನವರ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಸ್ಥಾಪಕ ಪರಶುರಾಮ ನೀಲನಾಯಕ ಅವರನ್ನು ಸನ್ಮಾನಿಸಲಾಯಿತು.

ಕೃತಿ: ನಮ್ಮ ಸಂವಿಧಾನ ನಮ್ಮ ಹೆಮ್ಮೆ

ಲೇಖಕರು: ಸೋಮಲಿಂಗ ಗೆಣ್ಣೂರ

ಪ್ರಕಟಣೆ; ಕವಿತಾ ಪ್ರಕಾಶನ ಮೈಸೂರು

ಬೆಲೆ: ₹200

ಕೃತಿ: ದೇವರಗೆಣ್ಣೂರ

ಲೇಖಕರು: ಸೋಮಲಿಂಗ ಗೆಣ್ಣೂರ

ಪ್ರಕಟಣೆ: ಕವಿತಾ ಪ್ರಕಾಶನ ಮೈಸೂರು

ಬೆಲೆ: ₹120

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.