ಬಾಗಲಕೋಟೆ: ಸಂಬಂಧಗಳನ್ನಾಗಲಿ, ಸಮಾಜವನ್ನಾಗಲಿ ಅತ್ಯಂತ ಗಟ್ಟಿಯಾಗಿ ಕಟ್ಟಬೇಕು ಎಂದು ಇಲ್ಲಿನ ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಇಲ್ಲಿನನವನಗರದಲ್ಲಿ ನೂತನವಾಗಿ ನಿರ್ಮಿಸಲಾದ ಗಜಾನನ, ಆಂಜನೇಯ, ಚಂದ್ರಾದೇವಿ ಮತ್ತು ದುರ್ಗಾದೇವಿ ದೇವಾಲಯ ಲೋಕಾರ್ಪಣೆ ಹಾಗೂ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಖಡಿ, ಮರಳು, ಸಿಮೆಂಟ್ ಸಮ್ಮಿಶ್ರದಿಂದ ಅತ್ಯಂತ ಸದೃಢ ಕಟ್ಟಡ ನಿರ್ಮಾಣವಾಗುವಂತೆ, ವಿಭಿನ್ನ ಮನಸ್ಸು, ವಿವಿಧ ಕ್ಷೇತ್ರಗಳ ಪ್ರತಿಭಾವಂತರ, ಸಾಮರಸ್ಯದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ. ಬಿಡಿ ಬಿಡಿಯಾಗಿ ಇರುವುದಕ್ಕಿಂತಲು ಇಡಿಯಾಗಿ ಇರುವುದು ಇಚ್ಚಾಶಕ್ತಿ ಹೆಚ್ಚಿಸುತ್ತದೆ. ದೇವರು ನೆಲೆ ನಿಂತ ದೇವಸ್ಥಾನಗಳು ಪರಿಶುದ್ಧವಾಗಿರಬೇಕು. ಮನಸ್ಸು ಕೂಡ ಪರಿಶುದ್ಧವಾಗಿರಬೇಕು. ಬಹಿರಂಗ ಮತ್ತು ಅಂತರಂಗ ಶುದ್ಧಿ ಎರಡೂ ಅಗತ್ಯ. ಆಗ ಮಾತ್ರ ದೇವರು ದೇವಸ್ಥಾನ ಮತ್ತು ಮನಸ್ಸನ್ನು ಆವಾಸ ಸ್ಥಾನ ಮಾಡಿಕೊಳ್ಳುತ್ತಾನೆ ಎಂದರು.
ಶಾಸಕ ವಿರಣ್ಣ ಚರಂತಿಮಠ ಅವರು ಮಾತನಾಡಿ, ದೇವಾನುದೇವತೆಗಳ ಅನುಗಹ್ರದಿಂದ ಭಾರತ ಕೊರೊನಾ ಮುಕ್ತ ರಾಷ್ಟ್ರವಾಗಲಿ ಎಂದರು. ಮಂಗಲಭವನದ ಉಗ್ರಾಣವನ್ನು ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಲ್ಲಿ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು. ಈ ದೇವಾಲಯ ಶಿಸ್ತಿನಿಂದ ಕಂಗೊಳಿಸುತ್ತಿದೆ. ಅದರಂತೆ ಜೀವನವು ಶಿಸ್ತಿನಿಂದ ಕಂಗೊಳಿಸಲಿ ಎಂದರು.
ಭೋವಿ ಸಮಾಜ ಸಂಘದ ರಾಜ್ಯ ಘಟಕದ ಕಾರ್ಯಧ್ಯಕ್ಷ ಅಶೋಕ ಲಿಂಬಾವಳಿ ಮಾತನಾಡಿ, ಕ್ರಿಯಾಶೀಲ ಸಮಾಜದಿಂದ ಪ್ರಗತಿ ಸಾಧ್ಯ. ಮುಳುಗಡೆ ಕಷ್ಟ ನಷ್ಟದ ನಡುವೆ ನವಜೀವನ ರೂಪಿಸಿಕೊಳ್ಳವುದು ಸವಾಲಿನ ಕೆಲಸದಲ್ಲಿ ಯಶಸ್ಸು ಕಂಡವರು ಪಾತ್ರೋಟಿಗಳು ಎಂದರು.
ಮೀಸಲಾತಿ ನೀಡಿಕೆ ನಂತರ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿ ಆಗುತ್ತಿದೆ. ಇದಕ್ಕೆ ಕೊಡಲಿಪೆಟ್ಟು ನೀಡುವ ಕುತಂತ್ರ ನಡೆಯುತ್ತಿದೆ. ಆದ ಕಾರಣ ಬಲಿಷ್ಠ ಪ್ರಬುದ್ಧ ಸಂಘಟನೆಯಾಗಿ ಭೋವಿ-ವಡ್ಡರ ಸಮಾಜ ಹೊರಹೊಮ್ಮಬೇಕು. ಭವ್ಯಭವಿಷ್ಯದ ದೃಷ್ಟಿಕೋನದಿಂದ ಸಂಸ್ಕಾರಕ್ಕಾಗಿ ಭೋವಿ ಗುರುಪೀಠದ ಸಂಪರ್ಕದಲ್ಲಿ ನಿರಂತರತೆ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ನಗರಸಭೆ ಸದಸ್ಯರಾದ ಅಂಬಾಜಿ ಜೋಶಿ, ಬಸವರಾಜ್ ಗುಳೇದ, ಸಂತೋಷ ವಕ್ರಾಣಿ, ಶಿವು ಮೇಲನಾಡು ಉಪಸ್ಥಿತರಿದ್ದರು. ಸಿದ್ದರಾಮಪ್ಪ ಪಾತ್ರೋಟಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಯಲ್ಲಪ್ಪ ಯ. ಕೋಟಿಕಲ್ಲ, ಬ್ರಹ್ಮಋಷಿ ಎಲ್. ಪಾತ್ರೋಟಿ, ವೈ.ಫಕೀರಪ್ಪ, ಮುತ್ತು ಆರ್. ಕಟ್ಟಿಮನಿ, ರಾಜಪ್ಪ ಪಾತ್ರೋಟಿ, ಮಾರುತಿ ಪಾತ್ರೋಟಿ, ಸುರೇಶ ಟಿ. ಪಾತ್ರೋಟಿ, ಚಂದ್ರಶೇಖರ ಪಾತ್ರೋಟಿ, ಬಸವರಾಜ ಪಾತ್ರೋಟಿ, ರಾಮಣ್ಣ ಪಾತ್ರೋಟಿ, ಮಲ್ಲಿಕಾರ್ಜುನ ಪಾತ್ರೋಟಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.