ADVERTISEMENT

ಗಣೇಶ ಉತ್ಸವ: ಖರೀದಿ ಭರಾಟೆ

2 ವರ್ಷದ ಬಳಿಕ ಪೆಂಡಾಲ್‌ಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ: ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2022, 5:40 IST
Last Updated 31 ಆಗಸ್ಟ್ 2022, 5:40 IST
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಮಂಗಳವಾರ ಖರೀದಿಯಲ್ಲಿ ತೊಡಗಿದ್ದ ಜನ
ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ಮಂಗಳವಾರ ಖರೀದಿಯಲ್ಲಿ ತೊಡಗಿದ್ದ ಜನ   

ಬಾಗಲಕೋಟೆ: ಗಣೇಶನ ಪ್ರತಿಷ್ಠಾಪನೆಗೆ ಸಿದ್ಧತೆಗಳು ಭರ್ಜರಿಯಾಗಿ ನಡೆದಿದ್ದು, ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.

ಮಂಗಳವಾರ ಬೆಳಿಗ್ಗೆಯಿಂದಲೇ ಆಗಾಗ ಸುರಿಯುತ್ತಿದ್ದ ಮಳೆಯ ನಡುವೆಯೇ ಜನರು ಹೂವು, ಹಣ್ಣು ಸೇರಿದಂತೆ ವಿವಿಧ ಪೂಜಾ ಸಾಮಗ್ರಿ, ಬಾಳೆ ದಿಂಡು, ಆಲಂಕಾರಿಕ ವಸ್ತುಗಳ ಖರೀದಿ ನಡೆಸಿದ್ದು ಕಂಡು ಬಂದಿತು.

ವಿದ್ಯಾಗಿರಿ, ಹಳೇ ಬಾಗಲಕೋಟೆ ಮಾರುಕಟ್ಟೆ ಪ್ರದೇಶಗಳಲ್ಲಿ ಖರೀದಿಗೆ ಜನರು ಮುಗಿಬಿದ್ದಿದ್ದರು. ಶ್ರಾವಣ ಮಾಸ ಸಂದರ್ಭದಲ್ಲಿ ಹೆಚ್ಚಾಗಿದ್ದ ಹೂವು, ಹಣ್ಣಿನ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ ಜನರು ಖರೀದಿಯಲ್ಲಿ ತೊಡಗಿದ್ದರು.

ADVERTISEMENT

ಪೆಂಡಾಲ್‌ಗೆ ಅಂತಿಮ ಟಚ್‌: ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಪೆಂಡಾಲ್‌ಗಳಲ್ಲಿ ಆಗಿರಲಿಲ್ಲ. ದೇವಸ್ಥಾನಗಳಲ್ಲಿ ಕೂಡಿಸಿ, ಕಳುಹಿಸಲಾಗಿತ್ತು. ಈ ಬಾರಿ ಪೆಂಡಾಲ್‌ಗಳಲ್ಲಿ ಕೂಡಿಸಲು ಅವಕಾಶ ನೀಡಿರುವುದರಿಂದ ಯುವಕರ ದಂಡು ಸಜ್ಜಾಗಿದೆ.

ನಾಲ್ಕಾರು ದಿನಗಳಿಂದ ಪೆಂಡಾಲ್‌ ಹಾಕುವ ಕಾರ್ಯ ನಡೆದಿದ್ದು, ಮಂಗಳವಾರ ಪೆಂಡಾಲ್‌ ಅಲಂಕಾರಕ್ಕೆ ಅಂತಿಮ ಟಚ್‌ ನೀಡುವ ಕಾರ್ಯದಲ್ಲಿ ತೊಡಗಿದ್ದರು.

ಈಗಾಗಲೇ ಗಣೇಶ ಮೂರ್ತಿಗಳ ತಯಾರಕರಿಗೆ ಮೂರ್ತಿಗಾಗಿ ಆರ್ಡರ್‌ ನೀಡಿದ್ದು, ಈಗಾಗಲೇ ಮೂರ್ತಿಗಳು ರೆಡಿಯಾಗಿವೆ. ಬುಧವಾರ ಬೆಳಿಗ್ಗೆ ಟ್ರ್ಯಾಕ್ಟರ್‌ಗಳಲ್ಲಿ ಮೆರವಣಿಗೆಯಲ್ಲಿ ತಂದು ಮಧ್ಯಾಹ್ನದ ವೇಳೆಗೆ ಪ್ರತಿಷ್ಠಾಪನೆ ಮಾಡಲಾಗುತ್ತದೆ.

ಮನೆಯಲ್ಲಿ ಕೂಡಿಸಿದ ಬಹಳಷ್ಟು ಗಣೇಶ ಮೂರ್ತಿಗಳನ್ನು ಮೊದಲ ದಿನ, ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಐದನೇ ದಿನಕ್ಕೆ ವಿಸರ್ಜನೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.