ಗುಳೇದಗುಡ್ಡದಲ್ಲಿರುವ ಹೆಚ್ಚುವರಿ ಪ್ರವಾಸಿ ಮಂದಿರದ ಹೊಸ ಕಟ್ಟಡ
ಗುಳೇದಗುಡ್ಡ: ಪಟ್ಟಣದ ಗಾಂಧಿ ಭವನದ ಎದುರಿಗಿರುವ ಹೆಚ್ಚುವರಿ ಹೊಸ ಪ್ರವಾಸಿ ಮಂದಿರ ನಿರ್ಮಾಣವಾಗಿ ವರ್ಷವಾಗುತ್ತಾ ಬಂದಿದ್ದು, ಇಂದಿಗೂ ಉದ್ಘಾಟಣೆಯಾಗಿಲ್ಲ.
₹1 ಕೋಟಿ ವೆಚ್ಚದಲ್ಲಿ ಕೆಳ ಹಾಗೂ ಒಂದು ಮಹಡಿ ಕಟ್ಟಡವಾಗಿ ಹೆಚ್ಚುವರಿ ಪ್ರವಾಸಿ ಮಂದಿರ ನಿರ್ಮಾಣ ಮಾಡಲಾಗಿದೆ. ಒಂದು ರಿಸಪ್ಶನ್ ಹಾಲ್, ನಾಲ್ಕು ಉತ್ತಮವಾದ ದೊಡ್ಡ ಕೊಠಡಿಗಳು, ಒಂದು ವಿಐಪಿ ಕೋಣೆಯಿದ್ದು ಉತ್ತಮವಾದ ಕಟ್ಟಡ ನಿರ್ಮಾಣವಾಗಿದೆ. ಆದರೆ ಈವರೆಗೆ ಉದ್ಘಾಟನೆಗೆ ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ.
ವಸತಿ ಗೃಹಗಳ ಕೊರತೆ: ಈಗಾಗಲೇ ಹೊಸ ಕಟ್ಟಡದ ಮುಂದೆ ಹಳೆ ಪ್ರವಾಸಿ ಮಂದಿರವಿದ್ದು ನಾಲ್ಕು ಕೊಠಡಿ, ಊಟದ ಕೊಠಟಿ, ವಿಐಪಿ ಕೊಠಡಿ ಇದೆ, ಆದರೆ ಶಿಥಿಲಾವಸ್ಥೆ ತಲುಪಿದೆ. ಅಲ್ಲಿಯೂ ಮೂಲಸೌಲಭ್ಯಗಳಿಲ್ಲ,ನೇಕಾರಿಕೆಯ ಪಟ್ಟಣ ಇದಾಗಿದ್ದರಿಂದ ಬೇರೆ ಕಡೆಯಿಂದ ಬಂದು ಖಣ, ಸೀರೆ ಖರೀದಿಸುವವರಿಗೆ ಒಂದು ದಿನದ ಮಟ್ಟಿಗೆ ತಂಗಲು ವಸತಿ ವ್ಯವಸ್ಥೆ ಇಲ್ಲ. ಇಲ್ಲಿ ಕೆಲಸ ಮುಗಿಸಿಕೊಂಡು ಅವರು, ಬಾದಾಮಿ ಅಥವಾ ಬಾಗಲಕೋಟೆಯಲ್ಲಿ ವಸತಿ ಮಾಡಿ ಮರಳಿ ಮತ್ತೆ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
ಗುಳೇದಗುಡ್ಡ ಪಟ್ಟಣದಲ್ಲಿ ವಸತಿ ಗೃಹಗಳ ತೀವ್ರ ಕೊರತೆ ಇದೆ. ಸರ್ಕಾರ ಕೂಡಲೇ ಗಮನಹರಿಸಿ ಪ್ರವಾಸಿ ಮಂದಿರ ಉದ್ಘಾಟಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎನ್ನುತ್ತಾರೆ ನೇಕಾರ ಮುಖಂಡ ಅಶೋಕ ಹೆಗಡೆ.
ಫರ್ನಿಚರ್ ಖರೀದಿಸಲು ದುಡ್ಡಿಲ್ಲ
ಹೊಸ ಕಟ್ಟಡಕ್ಕೆ ಫರ್ನಿಚರ್ ಅವಶ್ಯವಿದ್ದು, ಖರೀದಿಸಲು ಲೋಕೋಪಯೋಗಿ ಇಲಾಖೆ ಬಳಿ ಹಣ ಇಲ್ಲದೇ ಇರುವುದು ಪ್ರವಾಸಿ ಮಂದಿರ ಉದ್ಘಾಟನೆ ವಿಳಂಬವಾಗಲು ಕಾರಣವಾಗಿದೆ.
ಪಟ್ಟಣದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಅದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ಸರ್ಕಾರದಿಂದ ಇನ್ನಷ್ಟು ಹಣ ಬಿಡುಗಡೆಗೆ ಜನಪ್ರತಿನಿಧಿಗಳೂ ಪ್ರಯತ್ನಿಸಿ ಹೊಸ ಪ್ರವಾಸಿ ಮಂದಿರ ಉದ್ಘಾಟಿಸಬೇಕು ಎಂಬುವುದು ಜನರ ಆಗ್ರಹವಾಗಿದೆ.
ಹೆಚ್ಚುವರಿ ಹಣಕ್ಕಾಗಿ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹಣ ಬಂದ ಕೂಡಲೇ ಬಾಕಿ ಇರುವ ಕೆಲಸ ಮುಗಿಸಿ ಉದ್ಘಾಟಿಸಲಾಗುವುದುವೈ.ಎಫ್. ಆಡೀನ, ಕಿರಿಯ ಎಂಜಿನಿಯರ್, ಲೋಕೋಪಯೋಗಿ ಇಲಾಖೆ, ಬಾದಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.