ADVERTISEMENT

ಗುಳೇದಗುಡ್ಡ ತಾಲ್ಲೂಕು ರಚನೆಯಾಗಿ ಆರು ವರ್ಷ: ಸ್ವಂತ ಸೂರಿಲ್ಲದ ಸರ್ಕಾರಿ ಕಚೇರಿಗಳು

​ಪ್ರಜಾವಾಣಿ ವಾರ್ತೆ
Published 9 ಜೂನ್ 2025, 6:07 IST
Last Updated 9 ಜೂನ್ 2025, 6:07 IST
ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಪಂಚಾಯಿತಿ ಕಚೇರಿ
ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲ್ಲೂಕು ಪಂಚಾಯಿತಿ ಕಚೇರಿ   

ಗುಳೇದಗುಡ್ಡ: ತಾಲ್ಲೂಕು ರಚನೆಯಾಗಿ ಆರು ವರ್ಷಗಳು ಗತಿಸಿದರೂ ಸಂಪೂರ್ಣವಾಗಿ ಎಲ್ಲ ಕಚೇರಿಗಳು ಇದುವರೆಗೆ ಆರಂಭವಾಗಿಲ್ಲ. ಇರುವ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ, ನೋಂದಣಿ, ಕೃಷಿ ಇಲಾಖೆ ಕಚೇರಿಗಳು ಮಾತ್ರ ಗುಳೇದಗುಡ್ಡದಲ್ಲಿವೆ. ಉಳಿದ ಇಲಾಖೆಗಳ ಕೆಲಸಗಳಿಗೆ ಸಾರ್ವಜನಿಕರು ಇನ್ನೂ ಬಾದಾಮಿಗೆ ಅಲೆದಾಡುವುದು ತಪ್ಪಿಲ್ಲ.

ತಹಶೀಲ್ದಾರ್ ಕಚೇರಿ: ಇದು ಕೋಟೆಕಲ್ ಸಮೀಪದ ಜಲಸಂಪನ್ಮೂಲ ಇಲಾಖೆಯ ಮಲಪ್ರಭಾ ಎಡದಂಡೆ ಕಾಲುವೆಯ ವಸತಿ ಗೃಹ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಐದು ವಸತಿ ಗೃಹಗಳನ್ನು ಬಾಡಿಗೆ ಪಡೆದು ಕಚೇರಿಗಳಾಗಿ ಪರಿವರ್ತಿಸಿ ಕೆಲಸ ಮಾಡಲಾಗುತ್ತಿದೆ.

ADVERTISEMENT

ತಾಲ್ಲೂಕು ಪಂಚಾಯಿತಿ ಕಚೇರಿ: ಇದಕ್ಕೂ ಸ್ವಂತ ಸೂರು ಇಲ್ಲ. ಪುರಸಭೆಗೆ ಸಂಬಂಧಿಸಿದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಾಗ ಸಣ್ಣದಾಗಿದೆ. ಎರಡು ಕೊಠಡಿಗಳಲ್ಲೇ ಎಲ್ಲ ಕಾರ್ಯವನ್ನು ನಿರ್ವಹಿಸಬೇಕಾಗಿದೆ.

ಕೃಷಿ ಇಲಾಖೆ ಕಚೇರಿ (ರೈತ ಸಂಪರ್ಕ ಕೇಂದ್ರ): 2002 ರಲ್ಲೇ ಸರ್ಕಾರ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಸ್ಥಾಪಿಸಲಾಯಿತು. ಈ ಕಚೇರಿಗೂ ಸ್ವಂತ ಸೂರಿಲ್ಲ. ಬೀಜ, ಗೊಬ್ಬರ ದಾಸ್ತಾನು ಒಂದೆಡೆ, ಕಚೇರಿ ಒಂದೆಡೆ ಇರುವುದರಿಂದ ಕಷ್ಟವಾಗಿದೆ. ಬಸ್ ಘಟಕದ ಹತ್ತಿರ 13 ಗುಂಟೆ ಜಾಗ ಪಡೆಯಲಾಗಿದ್ದು, ಕಟ್ಟಡಕ್ಕೆ ಅನುದಾನ ಪಡೆದು ನಿರ್ಮಾಣವಾಗಬೇಕಿದೆ.

ನೋಂದಣಿ ಕಚೇರಿ:

ತಾಲ್ಲೂಕು ರಚನಾ ಪೂರ್ವದಿಂದಲೇ ಕಚೇರಿ ಆರಂಭಗೊಂಡಿದೆ. ಪುರಸಭೆಯ ಕಟ್ಟಡದಲ್ಲಿ ನೋಂದಣಿ ಇಲಾಖೆ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.

ದಿಕ್ಕಿಗೊಂದರಂತೆ ಕಚೇರಿ: ತಹಶೀಲ್ದಾರ್ ಕಚೇರಿಗೂ, ಕೃಷಿ ಇಲಾಖೆ ಕಚೇರಿಗೂ 2 ಕಿಲೋ ಮೀಟರ್ ಅಂತರದಲ್ಲಿವೆ. ಸಾರ್ವಜನಿಕರು ಅಲೆದಾಡಬೇಕಾದ ಸ್ಥಿತಿ ಇದೆ. ಎಲ್ಲ ಕಚೇರಿಗಳು ಒಂದೇ ಸೂರಿನಲ್ಲಿ ಆರಂಭವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಮೂಲಸೌಲಭ್ಯಗಳ ಕೊರತೆ: ಈ ಎಲ್ಲಾ ಕಚೇರಿಗಳಲ್ಲಿಯೂ ಮೂಲಸೌಲಭ್ಯಗಳಿಲ್ಲ. ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.

ಪ್ರಜಾಸೌಧ ನಿರ್ಮಾಣ: ಇತ್ತೀಚಿಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ₹8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಜಾಸೌಧವನ್ನು ವಿಳಂಬವಿಲ್ಲದೆ ನಿರ್ಮಿಸಬೇಕು ಎಂದು  ನೇಕಾರ ಮುಖಂಡ ಅಶೋಲ ಹೆಗಡೆ ಆಗ್ರಹಿಸಿದರು.

ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗುಳೇದಗುಡ್ಡ ತಹಶೀಲ್ದಾರ್ ಕಚೇರಿ
ಸರ್ಕಾರ ಈಗಾಗಲೇ ಪ್ರಜಾಸೌಧ ಮಾಡುವುದಾಗಿ ನಿರ್ಣಯ ಮಾಡಿದೆ. ಕಟ್ಟಡವಾದರೆ ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಅಲ್ಲಿಯವರೆಗೆ ಬಾಡಿಗೆ ಕಟ್ಟಡ ಅನಿವಾರ್ಯ
ಮಧುರಾಜ್ ಪ್ರಭಾರ ತಹಶೀಲ್ದಾರ್ ಗುಳೇದಗುಡ್ಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.