ಹುನಗುಂದ: ವಚನ ಸಾಹಿತ್ಯ ಸಂಗ್ರಹದಲ್ಲಿ ಡಾ.ಫ.ಗು.ಹಳಕಟ್ಟಿ ಅವರ ಕೊಡುಗೆ ಅಪಾರ ಎಂದು ಚಿತ್ತರಗಿ ಸಂಸ್ಥಾನ ಮಠದ ಇಳಕಲ್ ಗುರುಮಹಾಂತ ಸ್ವಾಮೀಜಿ ಹೇಳಿದರು.
ಬುಧವಾರ ಪಟ್ಟಣದ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ 33ನೇ ಮನೆ ಮನಗಳಿಗೆ ವಚನ ಸೌರಭ ಹಾಗೂ ಫ.ಗು.ಹಳಕಟ್ಟಿ ಜನ್ಮದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಾದಿ ಶರಣರ ವಚನಗಳನ್ನು ಆಧುನಿಕ ಕಾಲದಲ್ಲಿ ಜನಮನಕ್ಕೆ ತಲುಪಿಸದಿದ್ದರೆ ಮಾನವೀಯ ಮೌಲ್ಯ ಉಳಿಯುತ್ತಿರಲಿಲ್ಲ. ಅವರು ಸಮರ್ಪಣಾ ಭಾವದಿಂದ ವಚನ ಸಾಹಿತ್ಯ, ಸಂಶೋಧನೆ, ಸಂಪಾದನೆ ಕೈಗೊಂಡಿದ್ದರಿಂದಲೇ ವಚನ ಸಾಹಿತ್ಯ ನಮಗೆ ದೊರೆತಿದೆ. ಹಳಕಟ್ಟಿ ಅವರ ಬದುಕು, ಸಾಧನೆ ಕುರಿತು ಮಕ್ಕಳಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮೀನ ಕಿಲ್ಲೇದಾರ ಮಾತನಾಡಿ, ಫ.ಗು.ಹಳಕಟ್ಟಿ ಅವರ ವಚನಗಳನ್ನು ಮುದ್ರಣ ಮಾಡಿ ಮನೆ ಮನೆಗಳಿಗೆ ತೆರಳಿ ಪ್ರಸಾರ ಮಾಡಿದರು. ಇಂದಿನ ಮಕ್ಕಳಿಗೆ ಶರಣರ ವಚನಗಳಲ್ಲಿನ ವಿಚಾರಗಳನ್ನು ತಿಳಿಸುವುದು ಅತ್ಯವಶ್ಯಕತೆಯಿದೆ ಎಂದರು.
ಎಸ್.ಎನ್.ಹಾದಿಮನಿ ಮಾತನಾಡಿ ,ಫ.ಗು.ಹಳಕಟ್ಟಿ ಅವರು ಬಸವಣ್ಣನವರ ವಚನಗಳನ್ನು ಸಂಶೋಧಿಸಿ ಜಗತ್ತಿಗೆ ತೋರಿಸಿಕೊಟ್ಟು ಮಹಾತ್ಕಾರ್ಯ ಮಾಡಿದ್ದಾರೆ ಎಂದರು.
ನಿವೃತ್ತ ಡಿಡಿಪಿಐ ಸಿದ್ದರಾಮ ಮನಹಳ್ಳಿ ಮಾತನಾಡಿದರು.
ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ, ಬಿ ಆರ್ ಸಿ ಅಧಿಕಾರಿ ಸದಾಶಿವ ಗುಡಗುಂಟಿ, ಕದಳಿ ವೇದಿಕೆಯ ಅಧ್ಯಕ್ಷೆ ಶಿವಗಂಗಾ ದುದ್ಗಿ, ಪ್ರಭು ಮಾಲಾಗಿತ್ತಿಮಠ, ಮಲ್ಲಣ್ಣ ಲೆಕ್ಕಿಹಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.