ಹುನಗುಂದ: ಹೃದಯ ಸಂಬಂಧಿ ಕಾಯಿಲೆ ಬಗ್ಗೆ ನಿಷ್ಕಾಳಜಿ ತೋರದೇ ಮುಂಜಾಗ್ರತಾ ಕ್ರಮ ಅನುಸರಿಸಿ ಹತ್ತಿರದ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಬೇಕು ಎಂದು ಬಾಗಲಕೋಟೆಯ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥ ಡಾ. ಉಮೇಶ ರಾಮದುರ್ಗ ಹೇಳಿದರು.
ಇಲ್ಲಿನ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮಹಾವಿದ್ಯಾಲಯ, ಎಸ್.ಎಸ್. ಕಡಪಟ್ಟಿ ಔಷಧ ಹಾಗೂ ಹೊನ್ನಗುಂದ ಸಂಸ್ಕೃತಿ ಬಳಗದ ಸಹಯೋಗದಲ್ಲಿ ಬುಧವಾರ ನಡೆದ ಹೃದಯ ರಕ್ಷಣೆ ಜಾಗೃತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.
ಈಚಿನ ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ತೀವ್ರ ಹೃದಯಘಾತ ಸಂಭವಿಸಿ ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ನಿರಂತರ ಮೊಬೈಲ್ ಬಳಕೆ, ಒತ್ತಡದ ಜೀವನ, ಖುಷಿ ಇಲ್ಲದ ಬದುಕು ಕಾರಣವಾಗಿರಬಹುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಇಳಕಲ್ದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ’ವಯೋಮಿತಿಗೆ ತಕ್ಕಂತೆ ಮಿತವಾದ ಆಹಾರ ಸೇವಿಸಬೇಕು. ನೆಮ್ಮದಿಯ ಜೀವನ ನಡೆಸಬೇಕು’ ಎಂದರು.
ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, 'ಕಲುಷಿತ ಆಹಾರ ಮತ್ತು ಆಧುನಿಕ ಜೀವನ ಶೈಲಿಗೆ ಅಂಟಿಕೊಳ್ಳದೇ ಅವಿಭಕ್ತ ಕುಟುಂಬದಲ್ಲಿದ್ದ ಆಹಾರ ಕ್ರಮ, ಶ್ರಮ ಮತ್ತು ಮನರಂಜನೆಗೆ ಒತ್ತು ನೀಡಿ ನಮ್ಮ ಹೃದಯವನ್ನು ಆರೋಗ್ಯದಿಂದ ಇಟ್ಟುಕೊಳ್ಳಲು ಯತ್ನಿಸಬೇಕು’ ಎಂದರು.
ಬಾಗಲಕೋಟೆ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಡಾ. ಸಮೀರ ಕುಲಕರ್ಣಿ ಉಪನ್ಯಾಸ ನೀಡಿದರು. ವಿಜಯ ಮಹಾಂತೇಶ ವಿದ್ಯಾ ವರ್ಧಕ ಸಂಘದ ನಿರ್ದೇಶಕಾರದ ಬಸವರಾಜ ಕೆಂದೂರ, ವೀರಣ್ಣ ಬಳೂಟಗಿ, ಸಂಗಣ್ಣ ಚಿನಿವಾಲರ, ಎಂ.ಎಸ್. ಮಠ, ಹೊಸಬ ತಂಡದ ನಿರ್ದೇಶಕರಾದ ಮಹಾಂತೇಶ ಅಗಸಿಮುಂದಿನ, ಅಶೋಕ ಬಾವಿಕಟ್ಟಿ, ವೀರೇಶ ಕುರ್ತಕೋಟಿ ಇದ್ದರು. ಮುಖ್ಯ ಶಿಕ್ಷಕ ಪಿ.ಎಂ. ಅಕ್ಕಿ, ಶಿಕ್ಷಕಿ ಶೃತಿ ನಾರಾಯಣಕರ , ಉಪನ್ಯಾಸಕಿ ವೀಣಾ ಕಿರಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.