ಕುಳಗೇರಿ ಕ್ರಾಸ್: ಕುಳಗೇರಿ ಹೋಬಳಿಯಲ್ಲಿ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆ ಸುರಿಯಿತು. 14.1 ಸೆ.ಮೀ ಮಳೆ ದಾಖಲಾಗಿದೆ.
ಕುಳಗೇರಿ ಹೋಬಳಿಯ ಹನುಮಸಾಗರ ಗ್ರಾಮದಲ್ಲಿ 7ಮನೆಗಳಿಗೆ ನೀರು ನುಗ್ಗಿದೆ. ಹನುಮಸಾಗರ, ಮಮಟಗೇರಿ ಹಾಗೂ ಉಗಲವಾಟ, ಹಳಗೇರಿ ಗ್ರಾಮಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳಾದ ಈರುಳ್ಳಿ, ಮೆಕ್ಕೆಜೋಳ ಹಾಗೂ ಶೇಂಗಾ ಸೇರಿದಂತೆ ಬಹುತೇಕ ಬೆಳೆಗಳು ಮಳೆ ನೀರಿಗೆ ಹಾನಿಯಾಗಿವೆ. ರಾಮನಗೌಡ ಹಿರೇನಾಯ್ಕರ್ ಅವರಿಗೆ ಸೇರಿದ ಶೇಂಗಾ ರಾಶಿಯು ಕೊಚ್ಚಿ ಹೋದ ಘಟನೆ ಉಗಲವಾಟ ಗ್ರಾಮದಲ್ಲಿ ನಡೆದಿದೆ.
ಕಲ್ಲಾಪುರ ಕ್ರಾಸಿನಿಂದ –ಹನುಮಸಾಗರ ಗ್ರಾಮವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಮಧ್ಯೆದಲ್ಲಿ ಹಾದು ಹೋಗಿರುವ ನರ್ಸರಿ ಹಳ್ಳದಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು. ಕೆಲವು ಪ್ರಯಾಣಿಕರು ಕುಳಗೇರಿ ಕ್ರಾಸ್ನಿಂದ ನೀಲಗುಂದ ಗ್ರಾಮದ ಮುಖಾಂತರ ಹನುಮಸಾಗರ ಗ್ರಾಮವನ್ನು ತಲುಪಿದರು.
ಹನುಮಸಾಗರ ಗ್ರಾಮದಲ್ಲಿ 1 ಮನೆ ಹಾಗೂ ಉಗಲವಾಟ ಗ್ರಾಮದಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಹಾನಿಯಾದ ಮನೆಗಳಿಗೆ ಹನುಮಸಾಗರ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಆರ್.ಜಿ.ಯಳ್ಳಿ ಗುತ್ತಿ ಹಾಗೂ ಉಗಲವಾಟ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಸಿದ್ದಾರ್ಥ ಹಟ್ಟಿ, ಉಪ ತಹಶೀಲ್ದಾರ್ ಮೋಮಿನ್, ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.