ADVERTISEMENT

ಮಾತೆ ಮಹಾದೇವಿ ಬರಹ: ಜೀವನ ಶೃಂಗರಿಸುವುದು ಹೇಗೆ?

ಮಾತೆ ಮಹಾದೇವಿ
Published 14 ಮಾರ್ಚ್ 2019, 13:08 IST
Last Updated 14 ಮಾರ್ಚ್ 2019, 13:08 IST
   

ಸಾಮಾನ್ಯ ಲೌಕಿಕರು ದೇಹಕ್ಕೆ ಅಲಂಕಾರ ಮಾಡಿಕೊಳ್ಳುವುದರಲ್ಲೆ ಆಸಕ್ತಿ ಹೊಂದಿರುತ್ತಾರೆ. ಆದರೆ ಆದರ್ಶ ಮೌಲ್ಯಗಳಿಗೆ ಬೆಲೆ ಕೊಡುವ ಸಾಧಕ ಜೀವಿಗಳು ಜೀವನವನ್ನು ಸದ್ಗುಣಗಳಿಂದ ಅಲಂಕರಿಸಬಯಸುತ್ತಾರೆ.

ಕಣ್ಣಿಗೆ ಯಾವುದು ಶೃಂಗಾರ? ಗುರು ದರ್ಶನವನ್ನು ಪಡೆಯುವುದು, ಹಿರಿಯರ ದರ್ಶನವನ್ನು ಪಡೆದು ಗುರು ಹಿರಿಯರ ಆಶೀರ್ವಾದ ಪಡೆಯುವುದು ನಿಜವಾದ ಶೃಂಗಾರ.

ಕಿವಿಗೆ ಓಲೆ, ಆಭರಣ ಧರಿಸುವುದು ಭೌತಿಕ ಶೃಂಗಾರ, ಜ್ಞಾನಿಗಳ ದಿವ್ಯವಾಣಿ ಕೇಳುವುದು ಬೌದ್ಧಿಕ ಶೃಂಗಾರ. ಅವು ಜೀವನದಲ್ಲಿ ಮಾರ್ಗದರ್ಶನ ಮಾಡುವ ದಾರಿ ದೀಪಗಳು; ಕೆಲವೊಮ್ಮೆ ಸಂದಿಗ್ಧ ಪ್ರಸಂಗ ಎದುರಾದಾಗ ಸರಿಯಾದ ದಾರಿ ತೋರಿಸುವ ದಿಕ್ಸೂಚಿ.

ADVERTISEMENT

ವಚನಕ್ಕೆ ಅಂದರೆ ನಾಲಿಗೆಗೆ ಯಾವುದು ಶೃಂಗಾರ ಎಂದರೆ ಸತ್ಯವನ್ನು ನುಡಿಯುವುದು: ಸುಳ್ಳು ಕೆಲವೊಮ್ಮೆ ರಂಜನೀಯ ಎನಿಸಿದರೂ ಅದು ತಾತ್ಕಾಲಿಕವಾಗಿ ಭ್ರಮೆ ಹುಟ್ಟಿಸಿದರೂ ಶಾಶ್ವತವಾಗಿ ನಿಲ್ಲದು: ಸಂಭಾಷಣೆಯು ಪ್ರೌಢವಾಗಿ ಪರಿಣಾಮಕಾರಿಯಾಗಿ ಇರಬೇಕೆಂದರೆ ಅದರಲ್ಲಿ ಮಹಾತ್ಮರ ಶರಣರ ಲೋಕೋಕ್ತಿಗಳು ತುಂಬಿರಬೇಕು, ಅಧ್ಯಯನವನ್ನು ನಿರಂತರವಾಗಿ ಮಾಡುತ್ತ ಜ್ಞಾನಿಗಳ ಮಾತುಗಳನ್ನು ಬರೆದಿಟ್ಟುಕೊಂಡು ಭಾಷಣದಲ್ಲಿ ಬರವಣಿಗೆಯಲ್ಲಿ, ಸಂವಾದದಲ್ಲಿ ಬಳಸಬೇಕು. ಕೈಗೆ ಯಾವುದು ಚಂದ, ಬಂಗಾರದ ಬಳೆ, ತೋಳ ಬಂದಿ, ಕೈಕಡಗಗಳೇ? ಇಲ್ಲ; ಸತ್ಪ್ರಾತ್ರಕ್ಕೆ ದಾನ ಮಾಡುವುದು, ತನ್ನ ಗಳಿಕೆಯ ಒಂದು ಪಾಲನ್ನು ಸಮಾಜ-ಧರ್ಮಗಳ ಏಳಿಗೆಗೆ ಬಳಸುವುದು: ಜೀವನ ಎನ್ನುವುದು ದೇವರು ಕೊಟ್ಟ ಮಹಾನ್‌ ವರ ಅದಕ್ಕೆ ಅರ್ಥ ಬರಬೇಕಾದರ ಶರಣರ ಸತ್ಸಂಗದಲ್ಲಿ ನಡೆಯುವ ಆಧ್ಯಾತ್ಮಿಕ ಚಿಂತನೆ . ಈ ಎಲ್ಲ ಗುಣಗಳು, ಮೌಲ್ಯಗಳು ಇಲ್ಲದ ಜೀವನ ಅರ್ಥರಹಿತ ಯಾವುದಕ್ಕೂ ಪ್ರಯೋಜನವಿಲ್ಲ. ಮೌಲ್ಯ ಸಹಿತವಾದ ಜೀವನ ಲೋಕಕ್ಕೆ ದೊಡ್ಡ ಸಂಪತ್ತು.

(ಪ್ರಜಾವಾಣಿಯ ವಚನಾಮೃತ ಅಂಕಣದಲ್ಲಿ ಪ್ರಕಟವಾದ ಬರಹ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.