ಬಾಗಲಕೋಟೆ: ‘ರಾಜ್ಯ ರಾಜಕಾರಣದಲ್ಲಿ ಅನಾಚಾರ ಕೈಮೀರಿದ್ದು, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸುವ ಮೂಲಕ ಈ ದುರ್ವ್ಯವಹಾರ ಕೊನೆಗಾಣಿಸಲಿ‘ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕಸೋಮವಾರ ಇಲ್ಲಿ ಆಗ್ರಹಿಸಿದರು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿ ಇದೆ. 20 ಜಿಲ್ಲೆಗಳು ತೀವ್ರ ಕುಡಿಯುವ ನೀರಿನ ತೊಂದರೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಶಾಸಕರು ರೆಸಾರ್ಟ್ನಲ್ಲಿ ವಾಸ ಮಾಡುತ್ತಿರುವುದು ನಾಚಿಕೆಗೇಡು‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರೆಸಾರ್ಟ್ಗೆ ಹೋದವರಿಗೆ ಮಾನ–ಮರ್ಯಾದೆ ಇಲ್ಲ. ಅಲ್ಲಿ ಲಕ್ಷಾಂತರ ರೂಪಾಯಿ ವ್ಯಯ ಮಾಡುತ್ತಿರುವುದು ಅವರಪ್ಪನ ಮನೆಯ ದುಡ್ಡಲ್ಲ. ಬದಲಿಗೆ ಜನಸಾಮಾನ್ಯರ ತೆರಿಗೆ ಹಣ. ಅಂತಹ ಶಾಸಕರನ್ನು ಪೋಷಣೆ ಮಾಡುವವರು ರಾಜಕಾರಣದಲ್ಲಿರಲು ಅಯೋಗ್ಯರು‘ ಎಂದು ಟೀಕಿಸಿದರು.
‘ಇಂತಹ ಸಂದರ್ಭ ಮಧ್ಯಪ್ರವೇಶಿಸುವ ಹಕ್ಕುರಾಜ್ಯಪಾಲರಿಗೆ ಇಲ್ಲ ಎಂದು ಆಡಳಿತ ಪಕ್ಷದವರು ಹೇಳಿದರೆ, ಅವರಿಗೆ ಹಕ್ಕಿದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ದೇಶದ ಕಾನೂನನ್ನು ತಿರುಚಿ ಇಬ್ಬರೂ ತಮ್ಮ ಮೂಗಿನ ನೇರಕ್ಕೆ ಮಾತಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿ ನೋಡಿದರೆ ರಾಜ್ಯಪಾಲರ ಕೈಯಲ್ಲಿ ಏನೂ ಉಳಿದಿಲ್ಲ. ಹಾಗಾಗಿ ಕೇಂದ್ರ ಮಧ್ಯಪ್ರವೇಶಿಸಲಿ‘ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.