ಬಾಗಲಕೋಟೆ: ಖಾಸಗಿ ಸಮಾರಂಭದಲ್ಲಿ ನಾನು ಮಾತನಾಡಿದ ವಿಡಿಯೊವನ್ನು ಪೂರ್ಣ ತೋರಿಸದೆ ಕಿಡಿಗೇಡಿಗಳು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ಕಾರಣಕ್ಕೆ 'ಜೈ ಮಹಾರಾಷ್ಟ್ರ' ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ ಎಂದು ತೋಟಗಾರಿಕೆ ಸಚಿವ ನಾರಾಯಣ ಗೌಡ ಹೇಳಿದರು.
ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ 9ನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನೊಬ್ಬ ಬಡತನದಲ್ಲಿ ಹುಟ್ಟಿ ಹೊಟ್ಟೆ- ಬಟ್ಟೆಗಾಗಿ ಮಹಾರಾಷ್ಟ್ರಕ್ಕೆ ಹೋದವನು. ಆ ರಾಜ್ಯ ನನಗೆ ಅನ್ನ ಕೊಟ್ಟಿದೆ. ನಾನೊಬ್ಬನೇ ಅಲ್ಲ ಮುಂಬೈನಲ್ಲಿ ನಾವು 27 ಜನ ಕನ್ನಡಿಗರು ಒಟ್ಟಿಗೆ ಇದ್ದೇವೆ. ಬೆಳಿಗ್ಗೆ ಸಾಯಂಕಾಲ ಕನ್ನಡದಲ್ಲೇ ಮಾತಾಡ್ತೀವಿ, ಕನ್ನಡವನ್ನೇ ಹೊಗಳ್ತೀವಿ. ನಾವು ಕನ್ನಡಿಗರೇ ಎಂದರು.
ಅದೊಂದು ಸಾಂಸ್ಕೃತಿಕ ಕಾಯ೯ಕ್ರಮ ಆಗಿದ್ದರಿಂದ ಕೋಲ್ಕತ್ತ, ಕೇರಳ, ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳ ಜನರು ಬಂದಿದ್ದರು. ಎಲ್ಲರನ್ನೂ ಹೊಗಳಿ ಮಾತನಾಡಿದ್ದೇನೆ. ಆದರೆ ಅಲ್ಲಿ ಯಾರೋ ಕಿಡಿಗೇಡಿಗಳು ಮಹಾರಾಷ್ಟ್ರದ್ದನ್ನಷ್ಟೇ ವಿಡಿಯೊ ಎಡಿಟ್ ಮಾಡಿ ತೋರಿಸಿದ್ದಾರೆ. ನಾನು ಕನಾ೯ಟಕ, ನನ್ನ ರಕ್ತದಲ್ಲೇ ಕನಾ೯ಟಕ, ಕನ್ನಡ ಅನ್ನೋದು ಇದೆ. ಮಹಾರಾಷ್ಟ್ರದಲ್ಲಿ ವ್ಯವಹಾರ ಇದೆ. ಅಷ್ಟಕ್ಕೆ ನಾನು ಮಹಾರಾಷ್ಟ್ರ ಹೊಗಳಿ ಮಾತನಾಡಿದ್ದೇನೆ ಅನ್ನೋದೆಲ್ಲ ತಪ್ಪು ಎಂದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕಳೆದ 18 ತಿಂಗಳಿಂದ ಪೂರ್ಣಾವಧಿ ಕುಲಪತಿ ಇಲ್ಲ ಎಂಬುದು ಈಗ ಗೊತ್ತಾಗಿದೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿ ಈಗ ಒಂದು ವಾರ ಆಗಿದೆ. ಆ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚಚೆ೯ ಮಾಡಿ ಶೀಘ್ರದಲ್ಲೇ ಕುಲಪತಿ ನೇಮಕ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ನಾರಾಯಣಗೌಡ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.