ತೇರದಾಳ: ನಾಡು ನುಡಿ, ಇಲ್ಲಿನ ಜಲ ಗಡಿ ವಿಚಾರಗಳಲ್ಲಿ ಕನ್ನಡಿಗರು ಬಹಳ ಹೋರಾಟ ಮಾಡಿದ್ದೇವೆ. ಹಾಗಾಗಿ ಕನ್ನಡದ ಕೆಲಸಗಳಿಗೆ ಕಷ್ಟಗಳು ಬರದಂತೆ ಸಾಗಲಿ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ಪ್ರಭುಲಿಂಗೇಶ್ವರ ಪ್ರಸಾದ ಸಮಿತಿ ಸಭಾ ಭವನದಲ್ಲಿ ಭಾನುವಾರ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತು ತೇರದಾಳ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವನ್ನು ನೆರವೇರಿಸಿ ಅವರು ಮಾತನಾಡಿದರು.
ಎಲೆ ಮರೆಯ ಕಾಯಿಯಂತೆ ಕನ್ನಡ ಮಾತೆಯ ಸೇವೆ ಮಾಡುವ ಕನ್ನಡಾಭಿಮಾನಿಗಳನ್ನು ಗುರುತಿಸುವ ಮೂಲಕ ಪರಿಷತ್ತು ಬೆಳೆಯಬೇಕು ಎಂದರು.
ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಮಾತನಾಡಿ, ಬೆಡಗಿನ ವಚನಕಾರ ಅಲ್ಲಮಪ್ರಭುಗಳ ನಾಡಿನಲ್ಲಿ ಸಾಹಿತ್ಯ ಚಟುವಟಿಕೆಗಳು ಇನ್ನಷ್ಟು ಹೆಚ್ಚಬೇಕು. ಜಗತ್ತಿನೆಲ್ಲೆಡೆ ಅಲ್ಲಮರ ವಚನಗಳು ಪಸರಿಸಿದಂತೆ ಇಲ್ಲಿನ ಸಾಹಿತಿಗಳು ರಚಿಸುವ ಸಾಹಿತ್ಯ ವಿಶ್ವದಾದ್ಯಂತ ಹೆಸರು ಮಾಡಲಿ, ತೇರದಾಳ ತಾಲ್ಲೂಕು ಘಟಕದಿಂದ ಇನ್ನಷ್ಟು ಸಾಹಿತ್ಯ ಕೃಷಿ ಜರುಗಲಿ ಎಂದರು.
ಪುರಸಭೆ ಅಧ್ಯಕ್ಷೆ ಶಿಲ್ಪಾ ಗೌತಮ ರೋಡಕರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ವಿವರಿಸಿದರು.
ತೇರದಾಳ ತಾಲ್ಲೂಕು ಹೋರಾಟ ಸಮೀತಿ ಅಧ್ಯಕ್ಷ ಭುಜಬಲಿ ಕೆಂಗಾಲಿ, ನೌಕರರ ಸಂಘದ ತಾಲ್ಲೂಕಾಧ್ಯಕ್ಷ ಬಸವರಾಜ ಹನಗಂಡಿ, ಮುಖಂಡ ಬಸವರಾಜ ಬಾಳಿಕಾಯಿ ಮಾತನಾಡಿದರು. ಪ್ರವೀಣ ನಾಡಗೌಡ, ಸಿದ್ದು ಕೊಣ್ಣೂರ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಪುರಸಭೆ ಉಪಾಧ್ಯಕ್ಷೆ ನಸ್ರಿನ್ಬಾನು ನಗಾಜರ್ಿ, ಬಸಪರಯ್ಯ ಭಾಂವಿ, ಅನ್ನಪ್ರಸಾದ ಸಮಿತಿ ಅಧ್ಯಕ್ಷ ಬಸವರಾಜ ಕರ್ಲಟ್ಟಿ, ಡಾ.ಶಂಕರ ಅಥಣಿ, ಕಸಾಪ ತಾಲ್ಲೂಕಾ ಘಟಕದ ನೂತನ ಅಧ್ಯಕ್ಷ ಗಂಗಾಧರ ಮೋಪಗಾರ ಸೇರಿದಂತೆ ಪದಾಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.