ಬಾಗಲಕೋಟೆ: ‘ಜಿಲ್ಲೆಯ ಮಳೆಯಿಂದ ಹಾನಿಗೊಳಗಾದ ಸಂತ್ರಸ್ತರಿಗೆ ತಲುಪಿಸುವ ಪರಿಹಾರ ವಿತರಣೆಯಲ್ಲಿ ಅಕ್ರಮ, ಅನ್ಯಾಯ ಕಂಡು ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಹಿಂಜರಿಯುವುದಿಲ್ಲ‘ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ.ರಾಜೇಂದ್ರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇಲ್ಲಿನಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಎಲ್ಲ ತಹಶೀಲ್ದಾರ್ ಹಾಗೂ ಇಒಗಳ ಜೊತೆ ವಿಡಿಯೊ ಸಂವಾದ ನಡೆಸಿದ ಅವರು, ಅಧಿಕಾರಿಗಳು ಪರಿಹಾರ ವಿತರಣೆಯಲ್ಲಿ ಯಾವುದೇ ರೀತಿಯ ಅಕ್ರಮ, ಅವ್ಯವಹಾರದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಮುಲಾಜಿಲ್ಲದೇ ಎಫ್ಐಆರ್ ದಾಖಲಿಸಲಾಗುವುದು ಎಂದು ಹೇಳಿದರು.
ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮನೆ ಹಾಗೂ ಬೆಳೆಹಾನಿಯ ವಿಡಿಯೊ ಹಾಗೂ ಛಾಯಾಚಿತ್ರಗಳ ದಾಖಲೆಯೊಂದಿಗೆ ವಿವರ ಸಲ್ಲಿಸಬೇಕು. ಕಂದಾಯ ಇಲಾಖೆ, ಪಿಡಿೊ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸಮೀಕ್ಷೆ ನಡೆಸಬೇಕು ಎಂದು ತಿಳಿಸಿದರು.
ತಹಶೀಲ್ದಾರ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ತಾಲ್ಲೂಕಿನಾದ್ಯಂತ ಇರುವ ನಿವೇಶನ ರಹಿತರ ಸಂಖ್ಯೆ, ವಸತಿಯೋಜನೆ ಸಂಖ್ಯೆ, ವಸತಿಯೋಜನೆಗೆ ಲಭ್ಯವಿರುವ ಸರ್ಕಾರಿ ಜಮೀನು, ಗೋಮಾಳ, ಸ್ಮಶಾನ ಸ್ವಚ್ಛತೆ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ಭೂಮಿ, ವಸತಿ ಶಾಲೆಗಳಿಗೆ ಮೂಲ ಸೌಲಭ್ಯ ಕುರಿತಂತೆ ಮೂರು ದಿನಗಳೊಳಗಾಗಿ ಕಡ್ಡಾಯವಾಗಿ ವರದಿ ಸಂಗ್ರಹಿಸಬೇಕು.
ಯಾವ ಯಾವ ಗ್ರಾಮದಲ್ಲಿ ನಿವೇಶನ ರಹಿತರ ಸಂಖ್ಯೆ ಎಷ್ಟಿದೆ. ಸದ್ಯಕ್ಕೆ ಲಭ್ಯವಿರುವ ಜಮೀನಿನ ವಿವರ, ಖಾಸಗಿ ಖರೀದಿಗೆ ಪ್ರಸ್ತಾವನೆಗಳಿದಲ್ಲಿ ತಮ್ಮ ಕಚೇರಿಗೆ ತಲುಪಿಸಬೇಕು. ಗ್ರಾಮಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.
ಇಬ್ಬರು ಉಪ ವಿಭಾಗಾಧಿಕಾರಿಗಳು ಇದರ ಮೇಲುಸ್ತುವಾರಿ ವಹಿಸಿ 15 ದಿನಗಳಲ್ಲಿ ತಪ್ಪದೇ ವರದಿ ಹಾಗೂ ಪ್ರಸ್ತಾವನೆ ಕಳುಹಿಸಬೇಕು. ನಗರಪ್ರದೇಶಗಳಲ್ಲಿ ಸಿಟಿ ಸರ್ವೆಗಳು ಹಾಗೂ ಭೂದಾಖಲೆಗಳನ್ನು ಉಪನಿರ್ಬಂಧಕರು ಚುರುಕಾಗಿ ಪಾಲ್ಗೊಳ್ಳಬೇಕು. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ವಿವಿಧ ಯೋಜನೆಗಳಡಿ ವಸತಿ ನಿಲಯಗಳಿಗೆ ಸ್ಥಳ ಗುರುತಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಪ್ರವಾಹ ಹಾಗೂ ಮಳೆಯಿಂದಾದ ಮನೆಹಾನಿ, ಬೆಳೆಹಾನಿ, ಗ್ರಾಮವಾರು ವಿವರವನ್ನು ಪರಿಹಾರ ತಂತ್ರಾಂಶದಡಿ ಅಪ್ಡೇಟ್ ಆಗಿರಬೇಕು. ಬೆಳೆ ತಂತ್ರಾಂಶದಲ್ಲಿ ಕೃಷಿ ಅಧಿಕಾರಿಗಳು ಎಲ್ಲ ಡಾಟಾಗಳನ್ನು ನಮೂದಿಸಬೇಕು. ಭೂಮಿ ತಂತ್ರಾಂಶದಡಿ ಕಳೆದುಕೊಂಡಿದ್ದ ವರ್ಷದಿಂದ ಬಾಕಿ ಇದ್ದ ಪ್ರಕರಣಗಳನ್ನು ಕಳೆದೊಂದು ತಿಂಗಳಲ್ಲಿ ಅಪ್ಡೇಟ್ ಮಾಡಲಾಗಿದೆ. ಸಕಾಲದಡಿ ಸಹ ಜಿಲ್ಲೆಯ ಶ್ರೇಣಿ ತೀರ ಹಿಂದೆ ಉಳಿದಿದ್ದು, ಬಾಕಿ ಇರುವ ಪ್ರಕರಣಗಳನ್ನು ಆಯಾ ಇಲಾಖೆಗಳು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿಇಒ ಗಂಗೂಬಾಯಿ ಮಾನಕರ ಮಾತನಾಡಿ, ‘ವಸತಿರಹಿತರಿಗೆ ಜಮೀನು ಗುರುತಿಸುವಲ್ಲಿ ಆಯಾ ಪಿಡಿಒಗಳು, ಇಒಗಳು ತಕ್ಷಣವೇ ಚುರುಕಾಗಬೇಕು. ಮಳೆ ಹಾನಿಯಿಂದಾದ ಮನೆಹಾನಿ ಸಮೀಕ್ಷೆಯ ತಂಡ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಾಹಾದೇವ ಮುರಗಿ, ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೇಶಕ ವಿ.ಎಸ್.ಹೀರೆಮಠ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.