ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತ ಪೂರ್ಣಗೊಳಿಸಲು ವೆಚ್ಚವು ₹17 ಸಾವಿರ ಕೋಟಿಯಿಂದ ₹87 (₹87,818) ಸಾವಿರ ಕೋಟಿಗೆ ಹೆಚ್ಚಳವಾಗಿದೆ. ಮಾ.5ರಂದು ಕೃಷ್ಣಾ ಭಾಗ್ಯ ಜಲ ನಿಗಮವು ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ವೆಚ್ಚ ಹೆಚ್ಚಳವಾಗಿರುವುದು ಗೊತ್ತಾಗಿದೆ.
ಆಲಮಟ್ಟಿ ಜಲಾಶಯದ ಈಗಿರುವ ಗೇಟಿನ ಎತ್ತರವನ್ನು 519.6 ಮೀಟರ್ನಿಂದ 524.256 ಮೀಟರ್ಗೆ ಎತ್ತರಿಸಿದಾಗ ಮುಳುಗಡೆಯಾಗುವ ಭೂಮಿಗೆ ನೀಡಬೇಕಾದ ಪರಿಹಾರ, ಗ್ರಾಮಗಳ ಸ್ಥಳಾಂತರ ಮುಂತಾದ ಕಾರ್ಯಗಳಿಗೆ ದೊಡ್ಡ ಮೊತ್ತ ಬೇಕಾಗಿದ್ದು, ಅನುದಾನ ಹೊಂದಿಸುವ ಬಹುದೊಡ್ಡ ಸವಾಲು ರಾಜ್ಯ ಸರ್ಕಾರದ ಮುಂದಿದೆ.
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದಾಗ ಹಿನ್ನೀರಿನಲ್ಲಿ ಮುಳುಗಡೆಯಾಗುವ 1.33 ಲಕ್ಷ ಎಕರೆ ಭೂಸ್ವಾಧೀನ ಪಡಿಸಿಕೊಂಡು, ಮುಳುಗಡೆಯಾಗುವ 20 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಇಲ್ಲಿಯವರೆಗೆ ಕೇವಲ 29,500 ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. 1.03 ಲಕ್ಷ (1,03,500) ಎಕರೆ ಸ್ವಾಧೀನ ಪಡಿಸಿಕೊಳ್ಳಬೇಕಾಗಿದೆ.
2011ರಲ್ಲಿ ಮೂರನೇ ಹಂತದ ಯೋಜನೆಗೆ ಚಾಲನೆ ನೀಡಿದಾಗ ಅನುಷ್ಠಾನ ವೆಚ್ಚ ₹17 ಸಾವಿರ ಕೋಟಿ ಇತ್ತು. 2014–15ರಲ್ಲಿ ಅಂದಾಜು ಮಾಡಿದಾಗ ₹51,148 ಕೋಟಿಗೆ ಹೆಚ್ಚಾಗಿತ್ತು. 2018ರ ವೇಳೆಗೆ ₹78 ಸಾವಿರ ಕೋಟಿಗೆ ಏರಿತ್ತು. ಬಿಜೆಪಿ ಸರ್ಕಾರ ಭೂ ಪರಿಹಾರದ ಮೊತ್ತವನ್ನು ಪ್ರತಿ ಎಕರೆ ಒಣಬೇಸಾಯದ ಭೂಮಿಗೆ ₹5 ಲಕ್ಷದಿಂದ ₹20 ಲಕ್ಷಕ್ಕೆ, ನೀರಾವರಿ ಭೂಮಿಗೆ ₹6 ಲಕ್ಷದಿಂದ ₹24 ಲಕ್ಷಕ್ಕೆ ಏರಿಸಿದೆ. ಆ ದರದಂತೆ ಹಿಡಿದರೆ ₹87 ಸಾವಿರ ಕೋಟಿಗೂ ಹೆಚ್ಚಾಗಲಿದೆ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಬಾಗಲಕೋಟೆಯಿಂದ ಇತ್ತೀಚೆಗೆ ಹೋರಾಟ ನಡೆಸಿದ್ದ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿಯು ಭೂ ಪರಿಹಾರದ ಮೊತ್ತ ಹೆಚ್ಚಿಸುವ ಬೇಡಿಕೆ ಇಟ್ಟಿತ್ತು. 2024 ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಭೂ ಪರಿಹಾರ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಮುಖಂಡರಿಗೆ ಭರವಸೆ ನೀಡಿದ್ದರು.
‘ಭೂ ಪರಿಹಾರವನ್ನು ಒಣಬೇಸಾಯದ ಪ್ರತಿ ಎಕರೆಗೆ ಈಗಿರುವ ಬೆಲೆಯಿಂದ ₹25 ಲಕ್ಷ, ನೀರಾವರಿ ಭೂಮಿಗೆ ₹30 ಲಕ್ಷಕ್ಕೆ ಹೆಚ್ಚಿಸಿದರೆ ಅಂದಾಜು ಮೊತ್ತವು ₹87 ಸಾವಿರ ಕೋಟಿಯಿಂದ ₹92 ಸಾವಿರ (₹92,064) ಕೋಟಿಗೆ, ಪ್ರತಿ ಎಕರೆ ಬೆಲೆಯನ್ನು ಒಣ ಬೇಸಾಯಕ್ಕೆ ₹30 ಲಕ್ಷ, ನೀರಾವರಿ ಭೂಮಿಗೆ ₹35 ಲಕ್ಷಕ್ಕೆ ಹೆಚ್ಚಿಸಿದರೆ, ಅಂದಾಜು ವೆಚ್ಚ ₹96 (₹96,006) ಸಾವಿರ ಕೋಟಿಗೆ ಹೆಚ್ಚಲಿದೆ’ ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.
ಮೂರನೇ ಹಂತ ಜಾರಿಯಾದರೆ ಕಲಬುರಗಿ, ವಿಜಯಪುರ, ಬಾಗಲಕೋಟೆ, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತದೆ.
‘ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ಮಾಡಿರುವುದರಿಂದ ವೆಚ್ಚ ಹೆಚ್ಚಾಗುತ್ತಿದೆಯಲ್ಲದೇ, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಮೂದಿಸಿರುವುದರಿಂದ ಸಾಲ ಪಡೆಯಲು, ಮಾರಾಟ ಮಾಡಲು ಆಗುತ್ತಿಲ್ಲ’ ಎಂದು ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಪ್ರಕಾಶ ಅಂತರಗೊಂಡ ದೂರಿದರು.
ಭೂಮಿಗೆ ಈಗ ನಿರ್ಧರಿಸಿರುವ ಪರಿಹಾರ ಒಪ್ಪದೇ 20 ಸಾವಿರ ರೈತರು ಕೋರ್ಟ್ ಮೊರೆ ಹೋಗಿದ್ದಾರೆ. ಈಗ ಸಲ್ಲಿಸಿರುವ ಪ್ರಸ್ತಾವಕ್ಕಿಂತ ಹೆಚ್ಚಿನ ಪರಿಹಾರ ನಿಗದಿ ಮಾಡಬೇಕು–ಪ್ರಕಾಶ ಅಂತರಗೊಂಡ ಸಂಚಾಲಕ ಕೃಷ್ಣಾ ಮೇಲ್ದಂಡೆ ಯೋಜನೆ ಸಂತ್ರಸ್ತರ ಹೋರಾಟ ಸಮಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.