ಇಳಕಲ್ (ಬಾಗಲಕೋಟೆ ಜಿಲ್ಲೆ): ‘ಮುಸ್ಲಿಮರನ್ನು ಹಾಗೂ ಕ್ರಿಶ್ಚಿಯನ್ರನ್ನು ಸಂತೃಪ್ತಿಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಿಂದೂಗಳ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದೇ ಮಾತನ್ನು ಮೆಕ್ಕಾ, ಮದೀನಾಕ್ಕೆ ಏಕೆ ಹೋಗ್ತೀರಿ, ಬಡವರ ಹೊಟ್ಟೆ ತುಂಬುತ್ತಾ ಅಂತ ಕೇಳಿದ್ದರೆ ಮುಸ್ಲಿಮರು ರಾಜ್ಯ ಹಾಗೂ ದೇಶವನ್ನು ಬೆಂಕಿ ಹಚ್ಚಿ ಸುಟ್ಟು ಬಿಡ್ತಿದ್ದರು’ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದರು.
ಅವರು ಮಂಗಳವಾರ ಬಿಜೆಪಿ ಮುಖಂಡ ಆನಂದ ಚಲವಾದಿ ಅವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಜೇರುಸೇಲಂಗೆ ಏಕೆ ಹೋಗ್ತಿರಿ ಅಂತ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಖರ್ಗೆ ಕೇಳಿದ್ದರೆ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಒಂದು ನಿಮಿಷ ಇರುತ್ತಿರಲಿಲ್ಲ. ಹಿಂದೂಗಳು ಶಾಂತಿಯಿಂದ ಇರುತ್ತಾರೆ ಎಂಬ ನಂಬಿಕೆಯಿಂದ, ಶಾಂತಿಯನ್ನು ದೌರ್ಬಲ್ಯವೆಂದು ಭಾವಿಸಿ ಈ ಹೇಳಿಕೆ ನೀಡಿದ್ದಾರೆ’ ಎಂದು ಟೀಕಿಸಿದರು.
‘ಹಿಂದೂ ಸಮಾಜಕ್ಕೆ ಅವಮಾನ ಮಾಡುವುದನ್ನು ತಡೆಯುವುದು, ಹೋರಾಟ ಮಾಡುವುದು ಹಾಗೂ ಬಡತನದಲ್ಲಿರುವ ಸಣ್ಣ ಸಣ್ಣ ಸಾಧು ಸಂತರ, ಮಠಗಳ ಶ್ರೇಯೋಭಿವೃದ್ಧಿ ಮಾಡುವುದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಉದ್ದೇಶವಾಗಿದೆ’ ಎಂದು ಹೇಳಿದರು.
‘ಫೆ. 4ರಂದು ಬಸವನ ಬಾಗೇವಾಡಿಯಲ್ಲಿ ಬ್ರಿಗೇಡ್ ಆರಂಭವಾಗಲಿದೆ. 1008 ಸಾಧು ಸಂತರ ಪಾದಪೂಜೆ ಮಾಡಿ, ಹಿಂದುತ್ವ ಉಳಿಸುತ್ತೇವೆ ಎಂದು ಪ್ರತಿಜ್ಞೆ ಸ್ವೀಕರಿಸುತ್ತೇವೆ. ಕನೇರಿ ಮಠದ ಸ್ವಾಮೀಜಿ, ತಿಂಥಿಣಿಯ ಕಾಗಿನೆಲೆ ಶಾಖಾ ಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿಂದೂ ಸಮಾಜವನ್ನು ಜಾಗೃತಗೊಳಿಸುವುದಕ್ಕಾಗಿ ಬ್ರಿಗೇಡ್ ಆರಂಭವಾಗುತ್ತಿದೆ’ ಎಂದು ಅವರು ಹೇಳಿದರು.
ಬಿಜೆಪಿ ಗುಂಪುಗಾರಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ನಲ್ಲಿ ಯಾವಾಗ ಸಿದ್ಧರಾಮಯ್ಯ ಇಳಿದು ಹೋಗ್ತಾರೆ ಅಂತ ಕಾಯ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಅಂತ ಹೇಳುತ್ತಲೇ ಡಿನ್ನರ್ ಮಿಟಿಂಗ್ ಮಾಡ್ತಿದ್ದಾರೆ. ಕಾಂಗ್ರೆಸ್ನಲ್ಲಿ ಯಾವತ್ತೂ ಇಲ್ಲದಷ್ಟು ಗುಂಪುಗಾರಿಕೆ ಇದೆ. ಬಿಜೆಪಿಯಲ್ಲೂ ಇದೆ. ಆದರೆ ಬಿಜೆಪಿಯಲ್ಲಿ ಸರಿಪಡಿಸಲು ಹಿರಿಯರಿದ್ದಾರೆ’ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ವೀರೇಶ ಉಂಡೋಡಿ, ಅಜ್ಜಪ್ಪ ನಾಡಗೌಡ, ರಾಜು ನಾಡಗೌಡ, ಜಕ್ಕಪ್ಪ ಕಳ್ಳಿಗುಡ್ಡ, ಸಂಗಮೇಶ ಭೋವೆರ, ಲಿಂಗರಾಜ ಕುಂಬಾರ, ಗಂಗಪ್ಪ ಪೂಜಾರಿ, ಪ್ರಭು ಕೊಡಗಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.