
ಕೂಡಲ ಸಂಗಮದ ಸಂಗಮೇಶ್ವನಿಗೆ ಭಕ್ತರು ಸೋಮವಾರ ಕಾರ್ತಿಕ ದೀಪ ಹಚ್ಚಿದರು
ಕೂಡಲಸಂಗಮ: ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಕಾರ್ತಿಕೋತ್ಸವ ಸೋಮವಾರ ಸಂಭ್ರಮದಿಂದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.
ಸಂಗಮನಾಥನ ದರ್ಶನ ಪಡೆಯಲು ಭಕ್ತರು ಬೆಳಗ್ಗೆಯಿಂದ ರಾತ್ರಿಯವರೆಗೆ ಸರದಿಯ ಸಾಲಿನಲ್ಲಿ ನಿಂತಿದ್ದರು. ಮಧ್ಯಾಹನದ ನಂತರ ಭಕ್ತರ ಸಂಖ್ಯೆ ಅಧಿಕಗೊಂಡಿತ್ತು.
ಕುಟುಂಬ ಸಮೇತ ಆಗಮಿಸಿದ ಬಹುತೇಕ ಭಕ್ತರು ದೇವಾಲಯ ಆವರಣದಲ್ಲಿ ಸಿಹಿ ತಿಂಡಿ, ಭೋಜನ ಸವೆದು, ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಸಂಗಮೇಶ್ವರನಿಗೆ ಕಾರ್ತಿಕ ದೀಪ ಹಚ್ಚಿ ಸಂಭ್ರಮಿಸಿದರು.
ವಿಶೇಷ ಅಲಂಕಾರ: ಕಾರ್ತಿಕೋತ್ಸವದ ನಿಮಿತ್ಯ ಸಂಗಮೇಶ್ವರನಿಗೆ ವಿಶೇಷ ಅಲಂಕಾರ ಮಾಡಿದ್ದರು. ಭಕ್ತರು ಪೂಜೆ, ಅಭಿಷೇಕ ಮಾಡಿಸಿದರು. ಸಂಗಮೇಶ್ವರ ದೇವಾಲಯ, ಪ್ರವೇಶ ದ್ವಾರ, ಕಮಾನುಗಳಿಗೆ ವಿದ್ಯುತ್ ದ್ವೀಪಗಳ ಅಲಂಕಾರ ಎಲ್ಲ ಭಕ್ತರನ್ನು ಆಕರ್ಷಿಸಿತು.
ವಾಹನ ದಟ್ಟನೆ: ದೇವಸ್ಥಾನಕ್ಕೆ ಹೊಗುವ ಎರಡು ರಸ್ತೆಯಲ್ಲಿ ವಾಹನಗಳು ಎದುರು ಬದರು ಚಲಿಸಿದ್ದರಿಂದ ದರ್ಶನ ಪಡೆಯಲು ಬಂದ ಭಕ್ತರು ತೊಂದರೆ ಅನುಭವಿಸಿದರು. ರಸ್ತೆಯ ಬದಿಯಲ್ಲಿ, ಮಾಹಿತಿ ಕೇಂದ್ರ ಮುಂದೆ ವಾಹನಗಳು ಅಧಿಕವಾಗಿ ನಿಂತಿದ್ದರಿಂದ ದೇವಸ್ಥಾನಕ್ಕೆ ಸಂಚರಿಸಲು ಭಕ್ತರಿಗೆ ತೊಂದರೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.