ADVERTISEMENT

ಮಠಗಳು ಶೋಷಿತರಿಗೆ ಆತ್ಮಸ್ಥೈರ್ಯ ತುಂಬಲಿ: ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2024, 15:49 IST
Last Updated 23 ಡಿಸೆಂಬರ್ 2024, 15:49 IST
ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳವರ 39ನೇ ವಾರ್ಷಿಕ ಪುಣ್ಯಾರಾಧನೆ, ಶರಣ ಸಂಗಮ, ಗುರುಬಸವ ದೇವರ ಪಟ್ಟಾಭಿಷೇಕ ಸಮಾರಂಭದಲ್ಲಿ ಸಾಮೂಹಿಕ ವಿವಾಹ ನಡೆದವು
ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳವರ 39ನೇ ವಾರ್ಷಿಕ ಪುಣ್ಯಾರಾಧನೆ, ಶರಣ ಸಂಗಮ, ಗುರುಬಸವ ದೇವರ ಪಟ್ಟಾಭಿಷೇಕ ಸಮಾರಂಭದಲ್ಲಿ ಸಾಮೂಹಿಕ ವಿವಾಹ ನಡೆದವು   

ಗುಳೇದಗುಡ್ಡ: ‘ಮಠಗಳ ಉತ್ತಮ ಪರಂಪರೆಯಿಂದ ಸಮಾಜದಲ್ಲಿ ಬದಲಾವಣೆಯಾಗುತ್ತದೆ. ಮಠಗಳು ಶೋಷಿತರ, ಬಡವ, ಹಿಂದುಳಿದವರಿಗೆ ಆತ್ಮಸ್ಥೈರ್ಯ ತುಂಬಬೇಕು. ಇಂತಹ ಬದಲಾವಣೆಯ ನಂಬಿಕೆ ವಿಶ್ವಾಸದ ಮೇಲೆ ಮಠಗಳು ನಡೆದರೆ ನಾಡಿನ ಜನರಲ್ಲಿ ಉತ್ತಮ ಬದಲಾವಣೆಯಾಗುತ್ತದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳವರ 39ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ, ಗುರುಬಸವ ದೇವರ ಪಟ್ಟಾಭಿಷೇಕ ಹಾಗೂ ಗುರುಸಿದ್ದೇಶ್ವರ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಣೆಹಳ್ಳಿಯ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ನಿಜಗುಣ ಪ್ರಭು ಶ್ರೀಗಳು ಆಶೀರ್ವಚನ ನೀಡಿದರು.

ADVERTISEMENT

9 ಜೋಡಿಗಳ ವಿವಾಹ: ಇದೇ ಸಂದರ್ಭದಲ್ಲಿ ಶ್ರೀಮಠದಿಂದ 9 ಜೋಡಿಗಳ ಉಚಿತ ಸಾಮೂಹಿಕ ವಿವಾಹಗಳು ಜರುಗಿತು.

ಆನೆ ಮೇಲೆ ಮೆರವಣಿಗೆ: ಮಧ್ಯಾಹ್ನ 3 ಗಂಟೆಗೆ ಪಟ್ಟಣದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಆನೆ ಮೇಲೆ ವಚನ ಕಟ್ಟುಗಳ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು. ಪಟ್ಟಾಭಿಷೇಕಗೊಂಡ ಗುರುಬಸವ ಶ್ರೀಗಳ ಅಡ್ಡಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.

ಹಂಪಿಯ ದಯಾನಂದ ಪುರಿ ಶ್ರೀಗಳು, ಹರಿಹರದ ಪದ್ಮಸಾಲಿ ಗುರುಪೀಠದ ಪ್ರಭುಲಿಂಗ ಶ್ರೀಗಳು, ಗದಗ-ಬೆಟಗೇರಿಯ ನೀಲಕಂಠ ಪಟ್ಟದಾರ್ಯ ಶ್ರೀಗಳು, ನೀರಲಕೇರಿ ಘನಲಿಂಗ ಶ್ರೀಗಳು ಸೇರಿದಂತೆ 40 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ವಿವಿಧ ಮಠಗಳಿಂದ ಆಗಮಿಸಿದ ಶ್ರೀಗಳು ಪಟ್ಟಾಭಿಷೇಕ ಸಮಾರಂಭಕ್ಕೆ ಸಾಕ್ಷಿಯಾದರು.

ಕರ್ನಾಟಕ, ತಮಿಳನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ವಿವಿಧ ರಾಜ್ಯಗಳಿಂದ ಭಕ್ತರ ಆಗಮಿಸಿದ್ದರು. ಕರಡಿ ಮಜಲು, ಡೊಳ್ಳು ಕುಣಿತ, ಮಹಿಳೆಯರಿಂದ ಕುಂಭ ಮೆರವಣಿಗೆ, ಕಳಸದಾರತಿ, ಹಲಿಗೆ ಮಜಲು, ಹೀಗೆ ನಾನಾ ವಾದ್ಯ ಮೇಳಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು.

ಶಾಸಕ ಭೀಮಸೇನ ಚಿಮ್ಮನಕಟ್ಟಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ಶಾಸಕ ಪಿ.ಎಚ್.ಪೂಜಾರ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತ, ವೀರಣ್ಣ ಚರಂತಿಮಠ, ಎಂ.ಡಿ.ಲಕ್ಷ್ಮೀ ನಾರಾಯಣ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹನಮಂತ ಮಾವಿನಮರದ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಗೌಡ ಪಾಟೀಲ, ಬಿ.ಎಸ್.ಸೋಮಶೇಖರ, ರವೀಂದ್ರ ಕಲಬುರ್ಗಿ, ನವೀನ ಚಿಲ್ಲಾಳ, ತೋಟಪ್ಪ ಶೇಖಾ, ಪಿಚ್ಚಂಡಿ, ಶಿವಪ್ಪ ಶೆಟ್ಟರ, ಶೋಭಾ ಮುರಳಿಕೃಷ್ಣ, ಶಿವಲಿಂಗ ಟರ್ಕಿ ಇದ್ದರು.

ಗುಳೇದಗುಡ್ಡ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಲಿಂ. ಶ್ರೀಗಳವರ 39 ನೇ ವಾರ್ಷಿಕ ಪುಣ್ಯಾರಾಧನೆಯ ಶರಣ ಸಂಗಮ ಗುರುಬಸವ ದೇವರ ಪಟ್ಟಾಭಿಷೇಕ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.