ಮಹಾಲಿಂಗಪುರ: ಕಾರ್ಮಿಕರು ಪರಿಶ್ರಮಿಗಳಾಗಿದ್ದು, ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಪರಿವಾರವನ್ನು ಸಲಹುವ ದೊಡ್ಡ ಜವಾಬ್ದಾರಿ ಇವರ ಮೇಲಿದೆ. ಹೀಗಾಗಿ, ಸರ್ಕಾರ ₹ 3 ಸಾವಿರ ಮೌಲ್ಯದ ಔಷಧಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮುದಾಯ ಆರೋಗ್ಯ ಕೇಂದ್ರದ ಡಾ.ಸಿ.ಎಂ.ವಜ್ಜರಮಟ್ಟಿ ಹೇಳಿದರು.
ಪಟ್ಟಣದ ಮಾದಾರ ಚನ್ನಯ್ಯ ಸಾಂಸ್ಕೃತಿಕ ಭವನದಲ್ಲಿ ಕಟ್ಟಡ ಕಾರ್ಮಿಕ ಮತ್ತು ಕಾರ್ಮಿಕರ ಕಲ್ಯಾಣ ಸಂಘದ ವತಿಯಿಂದ ಕಾರ್ಮಿಕ ಇಲಾಖೆ ನೀಡಿರುವ 400ಕ್ಕೂ ಹೆಚ್ಚು ಪ್ರತಿರಕ್ಷಣಾ ಕಿಟ್ ಮತ್ತು ಆಯುಷ್ ಇಲಾಖೆ ನೀಡಿರುವ ರೋಗನಿರೋಧಕ ಹಾಗೂ ಶಕ್ತಿವರ್ಧಕ ಔಷಧಗಳ ಕಿಟ್ಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರ ಸದೃಢ ಆರೋಗ್ಯಕ್ಕಾಗಿ ಆಯುಷ್ಯ ಇಲಾಖೆ ಅನೇಕ ರೀತಿಯ ಔಷಧ ಮತ್ತು ಕಾರ್ಮಿಕ ಇಲಾಖೆ ಪ್ರತಿರಕ್ಷಣಾ ಸಾಮಗ್ರಿಗಳನ್ನೂ ಕೂಡ ನೀಡಿದೆ. ಇವುಗಳನ್ನು ಆರೋಗ್ಯ ಇಲಾಖೆಯ ಮಾರ್ಗದರ್ಶನದೊಂದಿಗೆ ಉಪಯೋಗಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಸಂಘದ ರಾಜ್ಯ ಕಾರ್ಯದರ್ಶಿ ಸದಾಶಿವ ಪೂಜಾರಿ ಮಾತನಾಡಿ, ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಸ್ಥಿರ ಆರೋಗ್ಯ ಕಾಪಾಡಿಕೊಳ್ಳಲು, ಸರ್ಕಾರ ಪ್ರತಿರಕ್ಷಣಾ ಕಿಟ್ ಮತ್ತು ಆಯುಷ್ಯ ಇಲಾಖೆಯ ವಿವಿಧ ರೀತಿಯ ಔಷಧಗಳನ್ನು ನೀಡುತ್ತಿದೆ ಎಂದರು.
ಡಾ. ಎ.ಆರ್. ಬೆಳಗಲಿ, ರೈತ ಸಂಘದ ಹಸಿರು ಸೇನೆ ರಾಜ್ಯ ಸಂಚಾಲಕ ಗಂಗಾಧರ ಮೇಟಿ, ಪತ್ರಕರ್ತ ಜಯರಾಮ ಶೆಟ್ಟಿ ಮಾತನಾಡಿದರು. ಗಾಯಕಿ ಲತಾ ಮಂಗೇಶ್ಕರ್, ಇಬ್ರಾಹಿಂ ಸುತಾರ ಅವರಿಗೆ ಒಂದು ನಿಮಿಷದ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮೇತ್ರಿ, ಮಹೇಶ ಆರಿ, ಈರಪ್ಪ ದಿನ್ನಿಮನಿ, ಅರ್ಜುನ ದೊಡಮನಿ, ಸಿರಾಜ ಮುಜಾವರ, ಪ್ರಶಾಂತ ಮುಕ್ಕೇನ್ನವರ, ಲಕ್ಷ್ಮಣ ಮಾಂಗ, ಜಯರಾಜ ಗಸ್ತಿ, ವಿಠ್ಠಲಗೌಡ ಕುಳಲಿ, ಸೈಯದ ನದಾಫ್, ಮಹಾಲಿಂಗಪ್ಪ ಭಜಂತ್ರಿ, ನಾಗೇಶ ಭಜಂತ್ರಿ, ತುಕಾರಾಮ ಮಾದರ, ಎಂ.ಡಿ.ಆನಂದ, ಎಸ್.ಎಸ್. ಈಶ್ವರಪ್ಪಗೋಳ, ಭೀಮಶಿ ಮಾವಿನಹಿಂಡಿ, ಬಸವರಾಜ ಮಾವಿನಹಿಂಡಿ, ಚೆನ್ನಪ್ಪ ಮೇತ್ರಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.