ADVERTISEMENT

ಮಹಾಲಿಂಗಪುರ | ಮೈನವಿರೇಳಿಸಿದ ಜೋಡೆತ್ತಿನ ಬಂಡಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 16:15 IST
Last Updated 28 ಏಪ್ರಿಲ್ 2024, 16:15 IST
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದಲ್ಲಿ ಅಮೋಘಸಿದ್ಧೇಶ್ವರ ಜಾತ್ರೆ ಅಂಗವಾಗಿ ಭಾನುವಾರ ಜೋಡೆತ್ತಿನ ಬಂಡಿ ಸ್ಪರ್ಧೆ ನಡೆಯಿತು
ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದಲ್ಲಿ ಅಮೋಘಸಿದ್ಧೇಶ್ವರ ಜಾತ್ರೆ ಅಂಗವಾಗಿ ಭಾನುವಾರ ಜೋಡೆತ್ತಿನ ಬಂಡಿ ಸ್ಪರ್ಧೆ ನಡೆಯಿತು   

ಮಹಾಲಿಂಗಪುರ: ಅಮೋಘಸಿದ್ಧೇಶ್ವರ ಜಾತ್ರೆಯ ನಾಲ್ಕನೇ ದಿನವಾದ ಭಾನುವಾರ ಸಂಜೆ ಸಮೀಪದ ನಾಗರಾಳ ಗ್ರಾಮದ ಹೊರವಲಯದಜಮೀನಿನಲ್ಲಿ ನಡೆದ ಜೋಡೆತ್ತಿನ ಬಂಡಿ ಸ್ಪರ್ಧೆ ಮೈನವಿರೇಳಿಸಿತು.

ಬಂಡಿಯ ನೊಗ ಹೊತ್ತು ಅಖಾಡಕ್ಕೆ ಇಳಿದ ಜೋಡಿ ಎತ್ತುಗಳು, ತೀರ್ಪುಗಾರರು ಸೀಟಿ ಊದುತ್ತಿದ್ದಂತೆ ಚಂಗನೆ ನೆಗೆದು ಮಿಂಚಿನಂತೆ ಓಡಿದವು. ಒಂದು ನಿಮಿಷದಲ್ಲಿ ಗರಿಷ್ಠ ದೂರ ಕ್ರಮಿಸಲು ಪರಸ್ಪರ ಪೈಪೋಟಿ ನಡೆಸಿದವು. ಎತ್ತುಗಳ ಓಟದ ವೇಗ ಹೆಚ್ಚಿಸಲು ಬಂಡಿ ಚಾಲಕರು ಬಾರಕೋಲಿನಿಂದ ಬಾರಿಸಿ ಸದ್ದು ಮಾಡುತ್ತಿದ್ದರು.

ಸ್ಥಳದಲ್ಲಿ ನೆರೆದಿದ್ದ ಜನಸ್ತೋಮ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ರೈತರಿಗೆ ಹುಮ್ಮಸ್ಸು ನೀಡಿತು. ವಿವಿಧೆಡೆಯಿಂದ ಆಗಮಿಸಿದ್ದ 15ಕ್ಕೂ ಹೆಚ್ಚು ಜೋಡೆತ್ತುಗಳು ಭಾಗವಹಿಸಿದ್ದವು. ಪ್ರಥಮ ₹15 ಸಾವಿರ, ದ್ವಿತೀಯ ₹10 ಸಾವಿರ, ತೃತೀಯ ₹7 ಸಾವಿರ, ಚತುರ್ಥ ₹5 ಸಾವಿರ, ಐದನೇ ಸ್ಥಾನ ₹3 ಸಾವಿರ ನಗದು ಬಹುಮಾನ ನಿಗದಿಪಡಿಸಲಾಗಿತ್ತು.

ADVERTISEMENT

ಜಾತ್ರೆ ಅಂಗವಾಗಿ ರಾತ್ರಿ ಗೀಗೀ ಪದಗಳ ಗಾಯನ ನಡೆಯಿತು. ಹರದೇಶಿಯಾಗಿ ಪರಶುರಾಮ ಅಭಿಹಾಳ, ನಾಗೇಶಿಯಾಗಿ ರಾಧಾಬಾಯಿ ತೆಲಸಂಗ ಗಮನಸೆಳೆದರು.

ಮಹಾಲಿಂಗಪುರ ಸಮೀಪದ ನಾಗರಾಳ ಗ್ರಾಮದಲ್ಲಿ ಅಮೋಘಸಿದ್ಧೇಶ್ವರ ಜಾತ್ರೆ ಅಂಗವಾಗಿ ಭಾನುವಾರ ಸಂಜೆ ನಡೆದ ಜೋಡೆತ್ತಿನ ಬಂಡಿ ಸ್ಪರ್ಧೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.