
ಶ್ರದ್ಧೆ, ಶ್ರಮದಿಂದ ಕೆಲಸ ಮಾಡಿ | ರಫ್ತಿನಲ್ಲಿ ಎಂಎಸ್ಎಂಇ ಪಾಲು ಹೆಚ್ಚು | ಯೋಜನೆಗಳ ಲಾಭ ಪಡೆದುಕೊಳ್ಳಿ
ಬಾಗಲಕೋಟೆ: ‘ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸುತ್ತಿರುವ ಈ ದಿನಗಳಲ್ಲಿ ಸರ್ಕಾರ ಮತ್ತು ಖಾಸಗಿ ಕಚೇರಿಗಳಲ್ಲಿ ಎಲ್ಲರಿಗೂ ಉದ್ಯೋಗ ಸಿಗುವುದು ಅನುಮಾನ. ಆದ್ದರಿಂದ ವಿದ್ಯಾರ್ಥಿಗಳು ಪದವಿ ಹಂತದಲ್ಲೇ ವ್ಯವಹಾರಿಕ ಜ್ಞಾನ ಪಡೆದುಕೊಂಡು ಸ್ವಉದ್ಯೋಗದ ಕೌಶಲ ಬೆಳಸಿಕೊಂಡು ಉದ್ಯಮ ಆರಂಭಿಸಬೇಕು’ ಎಂದು ಬಿಇಸಿ-ಸ್ಟೆಪ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಸ್. ಅಂಗಡಿ ಹೇಳಿದರು.
ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಶನ್ ಅಂಡ್ ಅಡ್ವರ್ಟೈಸಿಂಗ್ ಲಿಮಿಟೆಡ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಇನ್ಕ್ಯುಬೇಶನ್’ ವಿಷಯ ಕುರಿತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಬೇರೆಯವರ ಬಳಿ ಕೆಲಸ ಮಾಡುವುದರಿಂದ ನಿಮ್ಮ ಸಾಮರ್ಥ್ಯ ಗೊತ್ತಾಗುವುದಿಲ್ಲ. ಸ್ವಉದ್ಯೋಗ ಆರಂಭಿಸಿ ಶ್ರದ್ಧೆ ಹಾಗೂ ಪರಿಶ್ರಮದಿಂದ ಯಶಸ್ಸು ಸಾಧಿಸಬೇಕು’ ಎಂದು ಸಲಹೆ ನೀಡಿದರು.
‘ಎಂಎಸ್ಎಂಇ ಕ್ಷೇತ್ರವು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದು, ದೇಶದ ಒಟ್ಟು ರಫ್ತು ವ್ಯವಹಾರದಲ್ಲಿ ಶೇ45ರಷ್ಟು ಪಾಲು ಹೊಂದಿದೆ. ಕೊರೊನಾ ಸಮಯದಲ್ಲಿ ಎಂಎಸ್ಎಂಇ ಹಿನ್ನಡೆ ಅನುಭವಿಸಿದಾಗ, ಕೇಂದ್ರ ಸರ್ಕಾರ ‘ರ್ಯಾಂಪ್’ ಯೋಜನೆ ಪ್ರಾರಂಭಿಸಿತು. ಇದರ ಉದ್ದೇಶ ಎಂಎಸ್ಎಂಇ ಚಟುವಟಿಕೆಗೆ ವೇಗ ನೀಡುವುದಾಗಿತ್ತು. ‘ಮೇಕ್ ಇನ್ ಇಂಡಿಯಾ’ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆದು ತಮ್ಮ ಉದ್ಯಮ ಬಲಪಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾದ ಜೆ.ಡಿ. ಮಲ್ಲಾಪೂರ ಮಾತನಾಡಿ, ‘ಕಾರ್ಯಾಗಾರದಿಂದಾಗಿ ಉದ್ಯಮ ಆರಂಭದ ಕುರಿತು ಅರಿವು ಪಡೆಯಲು ಬೇರೆ ಕಡೆಗೆ ಹೋಗುವುದು ತಪ್ಪಿದೆ’ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಮಂಜುನಾಥ ಹೊಸಮನಿ, ಸಹಾಯಕ ನಿರ್ದೇಶಕಿ ರತ್ನಾ ಅಂಗಡಿ, ಗ್ರಾಮೀಣ ಕೈಗಾರಿಕೆ ಉಪ ನಿರ್ದೇಶಕ ಸಿದ್ದರಾಯ ಬಳೂರಗಿ, ಜಿಲ್ಲಾ ಕೈಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಅತಿಫ್ ಜಮಾದಾರ, ಎಂಎಸ್ಎಂಇ ವ್ಯವಸ್ಥಾಪಕ ದೀಪಕ್ ಡಿ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.